ADVERTISEMENT

ದೆಹಲಿಯಲ್ಲಿ ಕಿಸಾನ್‌ ಮಜ್ದೂರ್‌ ಮಹಾಪಂಚಾಯತ್‌: ಕೇಂದ್ರದ ವಿರುದ್ಧ ರೈತರ ಘೋಷಣೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 16:18 IST
Last Updated 14 ಮಾರ್ಚ್ 2024, 16:18 IST
ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ‘ಕಿಸಾನ್‌ ಮಜ್ಜೂರ್‌ ಮಹಾಪಂಚಾಯತ್‌’ನಲ್ಲಿ ವಿವಿಧ ರೈತ ಸಂಘಟನೆಗಳ ಸದಸ್ಯರು ಭಾಗಿಯಾಗಿದ್ದರು  –ಪಿಟಿಐ ಚಿತ್ರ
ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ‘ಕಿಸಾನ್‌ ಮಜ್ಜೂರ್‌ ಮಹಾಪಂಚಾಯತ್‌’ನಲ್ಲಿ ವಿವಿಧ ರೈತ ಸಂಘಟನೆಗಳ ಸದಸ್ಯರು ಭಾಗಿಯಾಗಿದ್ದರು  –ಪಿಟಿಐ ಚಿತ್ರ   

ನವದೆಹಲಿ: ದೇಶದ ವಿವಿಧ ರೈತ ಸಂಘಟನೆಗಳು ದೆಹಲಿಯ ರಾಮಲೀಲಾ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ‘ಕಿಸಾನ್ ಮಜ್ದೂರ್‌ ಮಹಾಪಂಚಾಯತ್‌’ನಲ್ಲಿ ಭಾರಿ ಸಂಖ್ಯೆಯಲ್ಲಿ ರೈತರು ಭಾಗಿಯಾಗಿದ್ದರು. ಈ ವೇಳೆ ಅವರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. 

ಬುಧವಾರ ರಾತ್ರಿಯೇ ದೆಹಲಿಗೆ ಆಗಮಿಸಿದ್ದ ಪಂಜಾಬ್‌ನ ಪಟಿಯಾಲಾದ ರೈತ ಹರ್ಮನ್‌ ಸಿಂಗ್‌ ಅವರು, ‘ಕೇಂದ್ರದ ನೀತಿಗಳು ರೈತರ ಪರವಾಗಿರಬೇಕು ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎಂಬ ನಮ್ಮ ಬೇಡಿಕೆಯನ್ನು ಕೇಂದ್ರ ಈಡೇರಿಸಬೇಕು’ ಎಂದು ಆಗ್ರಹಿಸಿದರು. 

ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ 2021ರ ಅಕ್ಟೋಬರ್‌ನಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ರೈತರ ಮೇಲೆ ಕೇಂದ್ರ ಸಚಿವರ ಮಗನ ಬೆಂಗಾವಲು ವಾಹನವನ್ನು ಹರಿಸಲಾಗಿತ್ತು. ಈ ಪ್ರಕರಣದಲ್ಲಿ ಸಂತ್ರಸ್ತ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಪಂಜಾಬ್‌ನ ಬಠಿಂಡಾದ ರೈತ ರವೀಂದರ್‌ ಸಿಂಗ್‌ ಅವರು ಆಗ್ರಹಿಸಿದರು.

ADVERTISEMENT

ಕೇಂದ್ರದ ಕೃಷಿ ನೀತಿಗಳ ವಿರುದ್ಧ ಹೋರಾಟವನ್ನು ತೀವ್ರಗೊಳಿಸುವುದಾಗಿ ಮಹಾಪಂಚಾಯತ್‌ನಲ್ಲಿ ನಿರ್ಣಯ ತೆಗೆದುಕೊಳ್ಳುವುದಾಗಿ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್‌ ಮೋರ್ಚಾ ತಿಳಿಸಿತ್ತು.

ರಾಮಲೀಲಾದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ಪೊಲೀಸರು ರೈತರಿಗೆ ಷರತ್ತುಬದ್ಧ ಅನುಮತಿ ನೀಡಿದ್ದರು. ಅದರಂತೆ, 5,000ಕ್ಕೂ ಹೆಚ್ಚು ಜನರು ರಾಮಲೀಲಾದಲ್ಲಿ ಸೇರುವಂತಿರಲಿಲ್ಲ ಮತ್ತು ಟ್ರಾಕ್ಟರ್‌ಗಳನ್ನು ದೆಹಲಿಯೊಳಗೆ ತರುವಂತಿರಲಿಲ್ಲ.

ಕೇಂದ್ರ ದೆಹಲಿಗೆ ಸಾಗುವ ಎಲ್ಲಾ ಮಾರ್ಗಗಳಲ್ಲೂ ಪೊಲೀಸರು ಸಂಚಾರ ಮಾರ್ಗಸೂಚಿಗಳನ್ನು ಹೊರಡಿಸಿದ್ದರು. ದೆಹಲಿಯ ಗಡಿಗಳಲ್ಲಿ ನಿಯೋಜಿಸಲಾಗಿರು ಅರೆಸೇನಾ ಪಡೆಗಳ ಬಲವನ್ನು ಹೆಚ್ಚಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.