ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ ನಡೆಯುತ್ತಿದೆ. ಎಚ್ಚರಿಕೆಯಿಂದ ಮತ ಚಲಾಯಿಸಿ ಎಂದು ದೇಶದ ಜನತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.
ಆರ್ಥಿಕ ಸಬಲೀಕರಣ ಮತ್ತು ಸಮಾನ ಅವಕಾಶಗಳ ಹೊಸ ಯುಗವು ತಮ್ಮನ್ನು ಕೈಬೀಸಿ ಕರೆಯುತ್ತದೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಿಸುವ ಹೋರಾಟ ಇಂದಿನಿಂದ ಆರಂಭವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
‘ನನ್ನ ಪ್ರೀತಿಯ ನಾಗರಿಕರೇ, 21 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇಂದು ಮೊದಲ ಹಂತದ ಮತದಾನ ನಡೆಯಲಿದೆ. ಎಚ್ಚರಿಕೆಯಿಂದ ಮತ ಚಲಾಯಿಸಿ ಎಂದು ನಾನು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ನ್ಯಾಯದ ಭವಿಷ್ಯವು ನಿಮಗಾಗಿ ಕಾಯುತ್ತಿದೆ’ ಎಂದು ಹೇಳಿದ್ದಾರೆ.
‘ಕಳೆದ 10 ವರ್ಷಗಳ ದಾಖಲೆ ನಿರುದ್ಯೋಗದ ಬದಲಾಗಿ, ಯುವ ನ್ಯಾಯದ ಮೂಲಕ ಉದ್ಯೋಗ ಕ್ರಾಂತಿಗೆ ನೀವು ಮತ ಚಲಾಯಿಸುತ್ತೀರಿ ಎನ್ನುವುದು ನನ್ನ ನಂಬಿಕೆ. ಬೆನ್ನುಮುರಿಯುವ ಬೆಲೆ ಏರಿಕೆ ಹಾಗೂ ಉಳಿತಾಯವನ್ನು 50 ವರ್ಷಗಳ ಕನಿಷ್ಠಕ್ಕೆ ಇಳಿಸಿದವರ ಬದಲಾಗಿ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ನೀಡುವ ನಾರಿ ನ್ಯಾಯಕ್ಕಾಗಿ ಮತ ಚಲಾಯಿಸಲಿದ್ದೀರಿ ಎನ್ನುವುದು ನನ್ನ ಆಶಾಭಾವನೆ’ ಎಂದು ಖರ್ಗೆ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.