ಲಖನೌ: ಉತ್ತರಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ಫೈನಾನ್ಸ್ ಕಂಪನಿಯ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಮೇಲಾಧಿಕಾರಿಗಳ ಒತ್ತಡವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
‘ಗುಮನಾವರ ಪಿಚೋರ್ ನಿವಾಸಿಯಾಗಿದ್ದ ತರುಣ್ ಸಕ್ಸೇನಾ (43) ಎಂಬವರು ಭಾನುವಾರ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾದೇಶಿಕ ಮ್ಯಾನೇಜರ್ ಆಗಿದ್ದ ತರುಣ್ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ 5 ಪುಟಗಳ ಪತ್ರ ಪತ್ತೆಯಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಸಾಲದಾರರಿಂದ ಮರುಪಾವತಿ ಮಾಡಿಸಿಕೊಳ್ಳುವಂತೆ ಕಂಪನಿಯ ಅಧಿಕಾರಿಗಳು ತುಂಬಾ ಒತ್ತಡ ಹೇರುತ್ತಿದ್ದರು. ಈ ಬಗ್ಗೆ ನನಗೆ ಕಿರುಕುಳ ನೀಡುತ್ತಿದ್ದರು’ ಎಂದು ತರುಣ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಫೈನಾನ್ಸ್ ಕಂಪನಿಯು ರೈತರಿಗೆ ಸಾಲ ನೀಡಿತ್ತು. ರೈತರು ಕೆಲ ತಿಂಗಳಿನಿಂದ ಸಾಲದ ಕಂತು ಮರುಪಾವತಿ ಮಾಡಿರಲಿಲ್ಲ. ಅವರಿಂದ ಸಾಲ ಮರುಪಾವತಿ ಮಾಡಿಸಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿತ್ತು. ಸಾಲ ಮರುಪಾವತಿಯಾಗದಿದ್ದರೆ, ಸಂಬಳದಲ್ಲಿ ಕಡಿತ ಮಾಡುವುದಾಗಿ ಎಚ್ಚರಿಕೆ ನೀಡಲಾಗಿತ್ತು ಎಂದು ತರುಣ್ ಪತ್ರದಲ್ಲಿ ತಿಳಿಸಿರುವುದಾಗಿ ಮೂಲಗಳು ಹೇಳಿವೆ.
‘ತರುಣ್ ಎರಡು ತಿಂಗಳುಗಳಿಂದ ತೀವ್ರ ಒತ್ತಡವನ್ನು ಅನುಭವಿಸುತ್ತಿದ್ದ’ ಎಂದು ಆತನ ಸಹೋದರ ಗೌರವ್ ಸಕ್ಸೇನಾ ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.