ADVERTISEMENT

ಗೃಹಿಣಿ‌ಯರ ಆರ್ಥಿಕ ಸಬಲೀಕರಣ ಸದೃಢ ಸಮಾಜ ನಿರ್ಮಾಣಕ್ಕೆ ದಾರಿ: ಬಿ.ವಿ.ನಾಗರತ್ನ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 18:33 IST
Last Updated 10 ಜುಲೈ 2024, 18:33 IST
<div class="paragraphs"><p>ನ್ಯಾಯಮೂರ್ತಿ ಬಿ.ವಿ.ನಾಗರತ್ನ</p></div>

ನ್ಯಾಯಮೂರ್ತಿ ಬಿ.ವಿ.ನಾಗರತ್ನ

   

ನವದೆಹಲಿ: ‘ಭಾರತದಲ್ಲಿ ವಿವಾಹಿತ ಮಹಿಳೆಯರ ಅರ್ಥಿಕ ಸಬಲೀಕರಣ ಮತ್ತು ಅವರಿಗೆ ಆರ್ಥಿಕ ಸ್ಥಿರತೆಯನ್ನು ಒದಗಿಸುವ ಅಗತ್ಯವಿದೆ’ ಎಂದು ಸುಪ್ರೀಂ ಕೋರ್ಟ್ ಬುಧವಾರ ಒತ್ತಿಹೇಳಿದೆ.

ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆಯರಿಗೆ ಕಾನೂನು ಪ್ರಕಾರ ಜೀವನಾಂಶ ನೀಡುವ ಕುರಿತ ಪ್ರಕರಣದ ತೀರ್ಪಿನಲ್ಲಿ ಕೋರ್ಟ್‌ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. 

ADVERTISEMENT

ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ತಮ್ಮ ತೀರ್ಪಿನಲ್ಲಿ, ‘ಕುಟುಂಬದ ಅರ್ಥವ್ಯವಸ್ಥೆ ಉತ್ತಮಪಡಿಸಲು ಹಾಗೂ ದೇಶದ ಆರ್ಥಿಕತೆಗೆ ದುಡಿಯುತ್ತಿರುವ ಗೃಹಿಣಿಯರ ಸೇವೆ ಮತ್ತು ತ್ಯಾಗವನ್ನು ಗುರುತಿಸಲು ಬದಲಾವಣೆಯ ತುರ್ತು ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಸ್ವತಂತ್ರವಾದ ಆದಾಯದ ಮೂಲವಿಲ್ಲದ ಹಾಗೂ ಹಣಕಾಸು ಪಡೆಯುವ ಸಹಜ ಅವಕಾಶವಿಲ್ಲದ, ಮುಖ್ಯವಾಗಿ ವೈಯಕ್ತಿಕವಾದ ಖರ್ಚು, ವೆಚ್ಚವನ್ನೂ ನಿಭಾಯಿಸಲು ಆಗದ ಗೃಹಿಣಿಯರ ದುರ್ಬಲ ಸ್ಥಿತಿಯನ್ನು ಅವರು ಉಲ್ಲೇಖಿಸಿದರು.

ಸ್ವತಂತ್ರ ಆದಾಯವಿಲ್ಲದ ಪತ್ನಿಯನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಬೇಕು ಎಂಬ ವಾಸ್ತವ ಕುರಿತ ಪ್ರಜ್ಞಾವಂತಿಕೆಯನ್ನು ಭಾರತದ ವಿವಾಹಿತ ಪುರುಷರೂ ಹೊಂದಬೇಕು. ಆರ್ಥಿಕ ಸಬಲೀಕರಣ ಗೃಹಿಣಿಯರಿಗೆ ಭದ್ರತೆ ನೀಡಲಿದೆ ಎಂದು ಹೇಳಿದರು.

ಜಂಟಿ ಬ್ಯಾಂಕ್‌ ಖಾತೆ ಹೊಂದುವುದು ಅಥವಾ ಜಂಟಿಯಾಗಿ ಎಟಿಎಂ ಕಾರ್ಡ್‌ಗಳ ನಿರ್ವಹಣೆ ಮೂಲಕ ಈಗಾಗಲೇ ಇಂಥ ಪ್ರಜ್ಞಾವಂತಿಕೆ ಪ್ರದರ್ಶಿಸುತ್ತಿರುವ ಜವಾಬ್ದಾರಿಯುತ ವಿವಾಹಿತ ಪುರುಷರ ನಡೆ ಗೌರವಿಸುವುದು ಅಗತ್ಯ ಎಂದು ಅವರು ಉಲ್ಲೇಖಿಸಿದರು.

‘ಆರ್ಥಿಕ ಭದ್ರತೆ’ ಮತ್ತು ‘ವಾಸ್ತವ್ಯದ ಭದ್ರತೆ’ ಎರಡೂ ಭಾರತೀಯ ಮಹಿಳೆಯರಿಗೆ ರಕ್ಷಣೆಯ ಭಾವ ನೀಡಲಿದೆ. ಗೃಹಿಣಿ ಎಂದು ಗುರುತಿಸುವ ಮಹಿಳೆಯನ್ನು ನಿಜವಾದ ಅರ್ಥದಲ್ಲಿ ಸಬಲೀಕರಣಗೊಳಿಸಲಿದೆ. ಭಾರತೀಯ ಸಮಾಜದ ಮೂಲ ಘಟಕವಾದ ಕುಟುಂಬಗಳಿಗೆ ಇಂಥ ಮಹಿಳೆಯರೇ ಬೆನ್ನೆಲುಬು. ಇದನ್ನು ಸದೃಢಗೊಳಿಸುವುದು ಅಗತ್ಯ ಎಂದರು.

ಭಾವನಾತ್ಮಕವಾದ ಸಂಬಂಧವಿರುವ, ಸ್ಥಿರತೆ ಹೊಂದಿರುವ ಕುಟುಂಬಗಳು ಈ ಸಮಾಜಕ್ಕೂ ಸ್ಥಿರತೆಯನ್ನು ಒದಗಿಸಲಿವೆ. ಇಂಥ ಕುಟುಂಬಗಳಲ್ಲೇ ಜೀವನದ ಅಮೂಲ್ಯ ಮೌಲ್ಯಗಳನ್ನು ಕಲಿಸಲಾಗುತ್ತದೆ ಮತ್ತು ಬೆಳೆಸಲಾಗುತ್ತದೆ ಎಂದೂ ತೀರ್ಪಿನಲ್ಲಿ ಪ್ರಸ್ತಾಪಿಸಿದ್ದಾರೆ.

ಪ್ರಕರಣದ ಹಿನ್ನೆಲೆ...

ಶಾ ಬಾನು ಪ್ರಕರಣದಲ್ಲಿ 1985ರಲ್ಲಿ ಈ ಸಂಬಂಧ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಜೀವನಾಂಶ ಪಡೆಯಲು ಅವಕಾಶ ನೀಡಿತ್ತು.

ಈ ತೀರ್ಪಿನ ವಿರುದ್ಧ ಸಂಪ್ರದಾಯವಾದಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆಗ ಅಧಿಕಾರದಲ್ಲಿ ಇದ್ದ ಕಾಂಗ್ರೆಸ್‌ ಸರ್ಕಾರ ಈ ತೀರ್ಪನ್ನು ಮೀರಿ ಕಾಯ್ದೆಯನ್ನು ರೂಪಿಸಿತ್ತು. 

ಹಿಂದಿನ ಬೆಳವಣಿಗೆಗಳ ಪ್ರಮುಖಾಂಶಗಳು...

  • ಏಪ್ರಿಲ್‌ 1978: ಪತಿ ಮೊಹಮ್ಮದ್ ಅಹ್ಮದ್ ಖಾನ್‌ ಅವರಿಂದ ಮಾಸಿಕ ₹ 500 ಜೀವನಾಂಶ ಕೋರಿ ಇಂದೋರ್‌ ಕೋರ್ಟ್‌ನಲ್ಲಿ ಶಾ ಬಾನು ಅವರಿಂದ ಮೊಕದ್ದಮೆ.

  • ನವೆಂಬರ್ 19‌78: ತಲಾಕ್‌ ಹಿಂಪಡೆದಿದ್ದ ಖಾನ್‌, ಶಾ ಬಾನು ನನ್ನ ಪತ್ನಿ. ಇಸ್ಲಾಮಿಕ್ ಕಾಯ್ದೆ ಪ್ರಕಾರ, ಆಕೆಗೆ ಜೀವನಾಂಶ ಕೊಡಲು ಅವಕಾಶವಿಲ್ಲ ಎಂದು ಹೇಳಿಕೆ.

  • ಆಗಸ್ಟ್‌ 1979: ಶಾ ಬಾನು ಅವರಿಗೆ ಮಾಸಿಕ ₹25 ಜೀವನಾಂಶ ನೀಡಲು ಸ್ಥಳೀಯ ಕೋರ್ಟ್ ಆದೇಶ.

  • ಜುಲೈ 1980: ಜೀವನಾಂಶದ ಮೊತ್ತವನ್ನು ಮಾಸಿಕ ₹179.20ಕ್ಕೆ ಏರಿಸಿದ ಮಧ್ಯಪ್ರದೇಶ ಹೈಕೋರ್ಟ್‌. ಶಾ ಬಾನು ಹೊಣೆಗಾರಿಕೆ ನನ್ನ ಮೇಲಿಲ್ಲ ಎಂದು ಸುಪ್ರೀಂ ಮೆಟ್ಟಿಲೇರಿದ ಖಾನ್.

  • ಏಪ್ರಿಲ್ 1985: ಶಾ ಬಾನು ಪರವಾಗಿ ಸುಪ್ರೀಂ ಕೋರ್ಟ್‌ ಆದೇಶ.

  • 1986: ಸುಪ್ರೀಂ ಕೋರ್ಟ್ ತೀರ್ಪು ಮೀರಿ ಸಂಸತ್ತಿನಲ್ಲಿ ಮುಸ್ಲಿಂ ಮಹಿಳೆ (ವಿಚ್ಛೇದನ ವೇಳೆ ಹಕ್ಕುಗಳ ರಕ್ಷಣೆ) ಕಾಯ್ದೆಯ ಅಂಗೀಕಾರ. ಕಾಯ್ದೆಯ ಪ್ರಕಾರ, ವಿಚ್ಛೇದಿತ ಮಹಿಳೆಯು ಕೇವಲ ಇದ್ಧತ್ ಅವಧಿಯಲ್ಲಿ ಮಾತ್ರ (ವೈಯಕ್ತಿಕ ಕಾಯ್ದೆಯಂತೆ ವಿಚ್ಛೇದನವಾದ ನಂತರದ 90 ದಿನ) ಜೀವನಾಂಶಕ್ಕೆ ಹಕ್ಕುದಾರಳು. 

  • 2001: 1986ರ ಕಾಯ್ದೆಯು ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆಯರ ಜಾತ್ಯತೀತ ಹಕ್ಕುಗಳ (ಸಿಆರ್‌ಪಿಸಿ ಸೆಕ್ಷನ್‌ 125ರ ಅನ್ವಯ) ರಕ್ಷಣೆಗೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್‌ ಅಭಿಮತ.

  • 2001: ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆಯರಿಗೂ ಸಿಆರ್‌ಪಿಸಿ ಸೆಕ್ಷನ್‌ 125ರ ಅನ್ವಯ ಹಕ್ಕುಗಳಿವೆ ಎಂದ ಸುಪ್ರೀಂ ಕೋರ್ಟ್.  

  • 2014: 1986 ಕಾಯ್ಕೆ ಸೆಕ್ಷನ್‌ 5ರ ಅನ್ವಯ ತನ್ನ ಆಯ್ಕೆಯನ್ನು ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆಯ ಪ್ರತಿಪಾದಿಸದಿದ್ದರೂ, ಸೆಕ್ಷನ್‌ 125 ಅನ್ವಯ ಹಕ್ಕುಗಳಿಗೆ ಆಕೆಗೆ ಅರ್ಹಳು ಎಂದು ಹೇಳಿದ ಸುಪ್ರೀಂ ಕೋರ್ಟ್. 

  • 2024: ಮುಸ್ಲಿಂ ಮಹಿಳೆಯು ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರವೇ ಮದುವೆಯಾಗಿ ಮತ್ತು ವಿಚ್ಛೇದನ ಪಡೆದಿದ್ದರೂ, ಸಿಆರ್‌ಪಿಸಿ ಸೆಕ್ಷನ್‌ 125 ಮತ್ತು 1986ರ ಕಾಯ್ದೆಯ ನಿಯಮಗಳು ಅನ್ವಯವಾಗಲಿವೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.