ಕೋಲ್ಕತ್ತ: ಕಲ್ಕತ್ತ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
‘ಇಂದು ಬಿಜೆಪಿ ಸೇರಿರುವುದು ಅತ್ಯಂತ ಒಳ್ಳೆಯ ವಿಷಯವಾಗಿದೆ. ಅವರು ನನ್ನನ್ನು ಸ್ವಾಗತಿಸಿದ ರೀತಿಗೆ ಮೂಕವಿಸ್ಮಿತನಾಗಿದ್ದೇನೆ.. ಈಗ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕೆಂಬುದು ಎಲ್ಲರಿಗೂ ತಿಳಿದಿದೆ’ ಎಂದು ಪಕ್ಷ ಸೇರ್ಪಡೆ ಬಳಿಕ ಅಭಿಜಿತ್ ಹೇಳಿದ್ದಾರೆ.
ಸಂದೇಶ್ಖಾಲಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅದು ಅತ್ಯಂತ ಕೆಟ್ಟ ಘಟನೆ. ನಮ್ಮ ಪಕ್ಷದ ರಾಜ್ಯ ನಾಯಕರು ಅಲ್ಲಿಗೆ ತೆರಳಿದ್ದರು. ಆದರೆ, ಸಂತ್ರಸ್ತರನ್ನು ಭೇಟಿ ಮಾಡುವುದರಿಂದ ಅವರನ್ನು ತಡೆಯಲು ಯತ್ನಿಸಲಾಗಿದೆ. ಆದರೂ ಅವರು ಅಲ್ಲಿಗೆ ತೆರಳಿ ದೌರ್ಜನ್ಯಕ್ಕೊಳಗಾದ ಮಹಿಳೆಯರ ಪರ ನಿಂತಿದ್ದಾರೆ. ಸಂದೇಶ್ಖಾಲಿಯಲ್ಲಿ ಜನರ ಮೇಲೆ ದೌರ್ಜನ್ಯ ಎಸಗುತ್ತಿರುವವರನ್ನು ಬಿಜೆಪಿ ಬಯಲಿಗೆಳೆಯಲಿದೆ’ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಕಂತ ಮಜುಂದಾರ್, ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ, ಅಭಿಜಿತ್ ಗಂಗೋಪಾಧ್ಯಾಯ ಅವರನ್ನು ಅಧಿಕೃತವಾಗ ಪಕ್ಷಕ್ಕೆ ಸ್ವಾಗತಿಸಿದರು.
‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನಾನು, ಅಭಿಜಿತ್ ಗಂಗೋಪಾಧ್ಯಾಯ ಅವರನ್ನು ನಮ್ಮ ಪಕ್ಷ, ನರೇಂದ್ರ ಮೋದಿಯವರ ಕುಟುಂಬಕ್ಕೆ ಸ್ವಾಗತಿಸುತ್ತಿದ್ದೇನೆ. ನ್ಯಾಯಮೂರ್ತಿಯಾಗಿ ಶೋಷಿತರ ಪರವಾಗಿ ಅವರ ಕೆಲಸವನ್ನು ಕಂಡಿದ್ದೇವೆ. ಬಿಜೆಪಿ ನಾಯಕರಾಗಿ ಅದೇ ಕೆಲಸ ಮುಂದುವರಿಸುತ್ತಾರೆ ಎಂದು ನಂಬುತ್ತೇನೆ’ ಎಂದು ಸುಕಂತ ಮಂಜುಂದಾರ್ ಹೇಳಿದ್ದಾರೆ.
ಮಂಗಳವಾರ ಕಲ್ಕತ್ತ ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಭಿಜಿತ್ ಗಂಗೋಪಾಧ್ಯಾಯ ಬಿಜೆಪಿ ಸೇರುವುದಾಗಿ ಘೋಷಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.