ನವದೆಹಲಿ: ಎನ್ಡಿಎ ಜೊತೆ ತೆಲುಗು ದೇಶಂ ಪಕ್ಷ (ಟಿಡಿಪಿ) ಮೈತ್ರಿ ಮಾಡಿಕೊಳ್ಳಲಿದೆ ಎಂಬ ವದಂತಿಯ ನಡುವೆಯೇ ಮಾಜಿ ಕೇಂದ್ರ ಸಚಿವ ಹಾಗೂ ಪಕ್ಷದ ಹಿರಿಯ ನಾಯಕ ಕಿಶೋರ ಚಂದ್ರ ದೇವ್ ಅವರು ಗುರುವಾರ ಪಕ್ಷ ತೊರೆದಿದ್ದಾರೆ.
‘ಅಧಿಕಾರದ ದಾಹಕ್ಕಾಗಿ ಆತ್ಮ ವಂಚನೆಯ ಕೆಲಸಕ್ಕೆ ನಾನು ಹೋಗುವುದಿಲ್ಲ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಎನ್.ಚಂದ್ರಬಾಬು ನಾಯ್ಡು ಅವರಿಗೆ ಬರೆದ ಪತ್ರದಲ್ಲಿ ಕಿಶೋರ ಚಂದ್ರ ತಿಳಿಸಿದ್ದಾರೆ.
‘ಧರ್ಮಾಂದರ ಭಯೋತ್ಪಾದನೆಯುಳ್ಳ ಅಧಿಪತ್ಯ ಸ್ಥಾಪಿಸಿ ಆ ಮೂಲಕ ಮತಬ್ಯಾಂಕ್ ಸೃಷ್ಟಿಸುವುದೇ ಎನ್ಡಿಎ ಸರ್ಕಾರದ ಏಕಮಾತ್ರ ಕಾರ್ಯಕ್ರಮ. ಇಂತಹ ವಿನಾಶಕಾರಿ ಶಕ್ತಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗುತ್ತಿರುವುದನ್ನು ಕಂಡು ದಿಗ್ಭ್ರಮೆಗೊಂಡಿದ್ದೇನೆ. ನನ್ನ ರಾಜಕೀಯ ಜೀವನದ 50 ವರ್ಷದಲ್ಲಿ ನಾನು ಕಂಡ ಕೀಳುಮಟ್ಟದ ರಾಜಕೀಯ ಇದಾಗಿದೆ’ ಎಂದಿದ್ದಾರೆ.
2019ರ ಲೋಕಸಭಾ ಚುನಾವಣೆ ವೇಳೆ ಟಿಡಿಪಿ ಸೇರ್ಪಡೆಯಾಗಿದ್ದ ಕಿಶೋರ ಚಂದ್ರ, ಅರಕು ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಆಂಧ್ರದ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರಾದ ಕಿಶೋರ ಚಂದ್ರ, ಚರಣ್ ಸಿಂಗ್ ಸರ್ಕಾರದಲ್ಲಿ ಉಕ್ಕು, ಗಣಿ ಮತ್ತು ಕಲ್ಲಿದ್ದಲು ರಾಜ್ಯ ಸಚಿವರಾಗಿದ್ದರು. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಬುಡಕಟ್ಟು ವ್ಯವಹಾರಗಳು ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದರು.
ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳು ಏಕಕಾಲದಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಜೊತೆ ಟಿಡಿಪಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಗೃಹ ಸಚಿವ ಅಮಿತ್ ಶಾ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.