ಮುಂಬೈ: ಮುಂಬೈನಲ್ಲಿ ಭಾರೀ ಗಾತ್ರದ ಜಾಹೀರಾತು ಹೋರ್ಡಿಂಗ್ ಜನರ ಮೇಲೆ ಬಿದ್ದು 16 ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ಮುಂಬೈ ಅಪರಾಧ ವಿಭಾಗ ರಚಿಸಿದೆ ಎಂದು ವರದಿಯಾಗಿದೆ.
ಈ ಕುರಿತು ಸುದ್ದಿಸಂಸ್ಥೆ 'ಎಎನ್ಐ' ವರದಿ ಮಾಡಿದೆ.
ಆರು ಅಧಿಕಾರಿಗಳನ್ನು ಒಳಗೊಂಡಿರುವ ಎಸ್ಐಟಿ ತಂಡವು ಈ ಘಟನೆಯ ಕುರಿತು ತನಿಖೆ ನಡೆಸಲಿದೆ. ಪ್ರಮುಖ ಆರೋಪಿ ಭವೇಶ್ ಭಿಂಡೆ ಅವರ ನಿವಾಸದಲ್ಲಿ ಎಸ್ಐಟಿ ಶೋಧ ನಡೆಸಿದ್ದು, ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಭವೇಶ್ ಭಿಂಡೆ ವಿವಿಧ ಬ್ಯಾಂಕ್ಗಳಲ್ಲಿ ಒಟ್ಟು ಏಳು ಖಾತೆಗಳನ್ನು ಹೊಂದಿದ್ದಾರೆ. ಹೋರ್ಡಿಂಗ್ ಗುತ್ತಿಗೆಯನ್ನು ಭಿಂಡೆ ಹೇಗೆ ಪಡೆದರು ಮತ್ತು ಇದರಿಂದ ಎಷ್ಟು ಹಣ ಪಡೆದರು ಎಂಬುದರ ಕುರಿತಾಗಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆಲವು ಅಧಿಕಾರಿಗಳ ಹೇಳಿಕೆಗಳನ್ನು ಎಸ್ಐಟಿ ದಾಖಲಿಸಿದೆ ಎಂದು ಮುಂಬೈ ಅಪರಾಧ ವಿಭಾಗ ತಿಳಿಸಿದೆ.
ಮೇ 13ರಂದು ಮುಂಬೈಯಲ್ಲಿ ಧೂಳು ಸಹಿತ ಬಿರುಗಾಳಿ ಮತ್ತು ಮಳೆ ಸುರಿಯುತ್ತಿದ್ದ ವೇಳೆ ಘಾಟ್ಕೋಪರ್ನಲ್ಲಿ ಅಕ್ರಮವಾಗಿ ಇರಿಸಲಾಗಿದ್ದ 120 ಚದರ ಅಡಿ ಎತ್ತರ ಮತ್ತು 120 ಅಡಿ ಅಗಲವಿದ್ದ ಜಾಹೀರಾತು ಫಲಕವು ಪೆಟ್ರೋಲ್ ಪಂಪ್ ಮೇಲೆ ಬಿದ್ದಿತ್ತು. ಜಾಹೀರಾತು ಫಲಕದ ಕೆಳಗೆ ಸಿಲುಕಿ 16 ಮಂದಿ ಮೃತಪಟ್ಟಿದ್ದರು. 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರಕರಣದ ನಂತರ ನಗರದಲ್ಲಿನ ಅಕ್ರಮ ಫಲಕಗಳನ್ನು ತೆರವುಗೊಳಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.