ಅಹಮದಾಬಾದ್: ನೀಟ್ ಅಕ್ರಮದ ಸಂಬಂಧ ಬಂಧಿತರಾಗಿರುವ ಶಾಲೆಯೊಂದರ ಪ್ರಾಂಶುಪಾಲರಿಗೆ ಗೋಧ್ರಾ ನ್ಯಾಯಾಲಯವು ಜಾಮೀನು ನಿರಾಕರಿಸಿದೆ. ಇದೇ ವೇಳೆ, ಪರೀಕ್ಷೆಯಲ್ಲಿ ಶಂಕಿತರು ನಕಲು ಮಾಡಿದ್ದಾರೆಯೇ ಇಲ್ಲವೇ ಎನ್ನುವುದನ್ನು ತಿಳಿಯಲು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್ಟಿಎ) ಗೋಧ್ರಾ ಪೊಲೀಸರಿಗೆ ಒಎಂಆರ್ ಹಾಳೆಗಳನ್ನು ಒದಗಿಸದೇ ಇರುವುದು ‘ದುರದೃಷ್ಟಕರ’ ಎಂದು ಗೋಧ್ರಾ ನ್ಯಾಯಾಲಯ ಹೇಳಿದೆ.
ಗೋಧ್ರಾದ ಜಯ್ ಜಲರಾಮ್ ಶಾಲೆಯಲ್ಲಿ ಶಂಕಿತರ ಯೋಜನೆಯನ್ನು ಕೊನೆಯ ಕ್ಷಣದಲ್ಲಿ ವಿಫಲಗೊಳಿಸಲಾಗಿತ್ತು ಮತ್ತು ಜಿಲ್ಲಾಧಿಕಾರಿಯು ಪರೀಕ್ಷಾ ಕೇಂದ್ರದ ಉಸ್ತುವಾರಿಗೆಂದು ಹೆಚ್ಚುವರಿ ಸಿಬ್ಬಂದಿಯನ್ನು ಕಳಿಸಿಕೊಟ್ಟಿದ್ದರಿಂದ ಪರೀಕ್ಷೆಯಲ್ಲಿ ನಕಲು ನಡೆದಿಲ್ಲ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಆದರೆ, ದಾಖಲೆಗಳನ್ನು ಪರಿಶೀಲಿಸಿದಾಗ ನಕಲು ನಡೆದಿರುವುದು ತಿಳಿದುಬಂದಿದೆ ಮತ್ತು ಆಯ್ದ ಕೆಲವರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಕನಿಷ್ಠ 30 ಅಭ್ಯರ್ಥಿಗಳಿಂದ ತಲಾ ₹10 ಲಕ್ಷ ಸಂಗ್ರಹಿಸಿ, ಅವರಿಂದ ಖಾಲಿ ಉತ್ತರ ಪತ್ರಿಕೆ ಪಡೆದು ನಂತರ ಅವನ್ನು ಭರ್ತಿ ಮಾಡಲಾಗಿದೆ ಎನ್ನುವ ಆರೋಪದ ಮೇರೆಗೆ ಶಾಲೆಯ ಪ್ರಾಂಶುಪಾಲರು ಸೇರಿದಂತೆ ಐವರನ್ನು ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.