ADVERTISEMENT

ಕೇಂದ್ರಕ್ಕೆ ಜೆಡಿಯು,ಟಿಡಿಪಿಯೇ ಊರುಗೋಲು: NDA ವಿರುದ್ಧ ಹರಿಹಾಯ್ದ ವಿಪಕ್ಷಗಳು

ಲೋಕಸಭೆ: ಎನ್‌ಡಿಎ ಸರ್ಕಾರದ ವಿರುದ್ಧ ಹರಿಹಾಯ್ದ ವಿಪಕ್ಷಗಳು

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 14:43 IST
Last Updated 2 ಜುಲೈ 2024, 14:43 IST
<div class="paragraphs"><p>ಸಂಸತ್‌ ಅಧಿವೇಶನದ ಅಂಗವಾಗಿ ಲೋಕಸಭೆಯಲ್ಲಿ ಮಂಗಳವಾರ ನಡೆದ ಕಲಾಪದಲ್ಲಿ ಟಿಎಂಸಿ ಸಂಸದ ಕಲ್ಯಾಣ ಬ್ಯಾನರ್ಜಿ ಮಾತನಾಡಿದರು –ಪಿಟಿಐ ಚಿತ್ರ&nbsp; </p></div>

ಸಂಸತ್‌ ಅಧಿವೇಶನದ ಅಂಗವಾಗಿ ಲೋಕಸಭೆಯಲ್ಲಿ ಮಂಗಳವಾರ ನಡೆದ ಕಲಾಪದಲ್ಲಿ ಟಿಎಂಸಿ ಸಂಸದ ಕಲ್ಯಾಣ ಬ್ಯಾನರ್ಜಿ ಮಾತನಾಡಿದರು –ಪಿಟಿಐ ಚಿತ್ರ 

   

ನವದೆಹಲಿ: ಲೋಕಸಭಾ ಚುನಾವಣೆ ವೇಳೆ ಬಿಜೆಪಿ ನಾಯಕರು ಪ್ರದರ್ಶಿಸಿದ ‘ದುರಹಂಕಾರ’ ಮತ್ತು ‘ಪ್ರತೀಕಾರ ಮನೋಭಾವ’ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಮಂಕಾಗುವಂತೆ ಮಾಡಿತು. ಈಗ ಅವರು ಸ್ಥಿರ ಸರ್ಕಾರಕ್ಕಾಗಿ ಮಿತ್ರಪಕ್ಷಗಳನ್ನು ಅವಲಂಬಿಸಬೇಕಾಗಿದೆ ಎಂದು ವಿರೋಧ ಪಕ್ಷಗಳು ಸಂಸತ್‌ನಲ್ಲಿ ಮಂಗಳವಾರ ಹೇಳಿವೆ.

ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ವಿರೋಧ ಪಕ್ಷಗಳ ನಾಯಕರು ಆಡಳಿತಾರೂಢ ಬಿಜೆಪಿಯನ್ನು ಕುಟುಕಿದರು.

ADVERTISEMENT

ಟಿಎಂಸಿ ಸದಸ್ಯ ಕಲ್ಯಾಣ ಬ್ಯಾನರ್ಜಿ,‘ಈ ಬಾರಿಯ ಲೋಕಸಭಾ ಚುನಾವಣೆ ದೇಶದಲ್ಲಿ ಬದಲಾವಣೆ ತಂದಿದೆ. ದೇಶದಲ್ಲಿ ಈಗ ಅಸ್ಥಿರ ಸರ್ಕಾರ ಮತ್ತು ಪ್ರಬಲ ವಿರೋಧ ಪಕ್ಷ ಇದೆ’ ಎಂದರು.

‘ಟಿಡಿಪಿಯ ಚಂದ್ರಬಾಬು ನಾಯ್ಡು ಹಾಗೂ ಜೆಡಿಯುನ ನಿತೀಶ್‌ ಕುಮಾರ್ ಎಂಬ ಎರಡು ಊರುಗೋಲುಗಳ ನೆರವಿನಿಂದ ಪ್ರಧಾನಿ ನರೇಂದ್ರ ಮೋದಿ ಈಗ ಸರ್ಕಾರ ನಡೆಸುತ್ತಿದ್ದಾರೆ’ ಎಂದೂ ಬ್ಯಾನರ್ಜಿ ಹೇಳಿದರು.

‘ಕಳೆದ 10 ವರ್ಷಗಳ ಅವಧಿಯಲ್ಲಿ ವಿರೋಧ ಪಕ್ಷಗಳ ನಾಯಕರು ಅಥವಾ ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಕುರಿತು ಪ್ರಧಾನಿ ಮೃದು ಭಾಷೆ ಇಲ್ಲವೇ ಉತ್ತಮ ಪದಗಳನ್ನು ಬಳಸಿದ್ದನ್ನು ಕೇಳಿಲ್ಲ. ಪಶ್ಚಿಮ ಬಂಗಾಳದಲ್ಲಿ ನೀವು ನಮ್ಮ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ದ್ವೇಷಿಸುತ್ತೀರಿ. ತಮಿಳುನಾಡಿನಲ್ಲಿ ಎಂ.ಕೆ.ಸ್ಟಾಲಿನ್, ಜಾರ್ಖಂಡ್‌ನಲ್ಲಿ ಹೇಮಂತ ಸೊರೇನ್ ಹಾಗೂ ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್‌, ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ, ಉತ್ತರ ಪ್ರದೇಶದಲ್ಲಿ ಅಖಿಲೇಶ್‌ ಯಾದವ್ ಹಾಗೂ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರನ್ನು ದ್ವೇಷಿಸುತ್ತೀರಿ’ ಎಂದು ಟೀಕಿಸಿದರು.

‘ನೀವು ದುರಹಂಕಾರಿಯಾಗಿದ್ದರೆ ನಾವೇನೂ ತಲೆಕೆಡಿಸಿಕೊಳ್ಳುವುದಿಲ್ಲ. ಈಗ ನಿಮ್ಮ ಬಗ್ಗೆ ನೀವೇ ಮರುಚಿಂತನೆ ಮಾಡಬೇಕಾದ ಸಮಯ ಬಂದಿದೆ. ಈ ದುರಹಂಕಾರ, ದ್ವೇಷ ಹಾಗೂ ಹಗೆತನಗಳೇ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಕುಗ್ಗಿಸಿವೆ’ ಎಂದೂ ಹೇಳಿದರು.

ಕಾಂಗ್ರೆಸ್‌ ಸದಸ್ಯ ಕೆ.ಸಿ.ವೇಣುಗೋಪಾಲ್‌ ಮಾತನಾಡಿ,‘ಬಿಜೆಪಿ ನಾಯಕರು ಹಿಂದುತ್ವದಲ್ಲಿ ನಂಬಿಕೆ ಹೊಂದಿಲ್ಲ. ಆದರೆ, ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಮತದಾರರ ಧ್ರುವೀಕರಣಕ್ಕಾಗಿ ಮಾತ್ರ ಧರ್ಮವನ್ನು ಬಳಸಿಕೊಂಡರು’ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವರಿಗಿಂತ ದೊಡ್ಡವರು ಎಂಬಂತೆ ಬಿಂಬಿಸಿದ್ದೇ ಪ್ರಬಲ ಹಿಂದೂ ವಿರೋಧಿ ಹೇಳಿಕೆ. ಹಿಂದೂ ಧರ್ಮದ ಪ್ರಕಾರ ದೇವರಿಗಿಂತ ದೊಡ್ಡವರು ಯಾರೂ ಇಲ್ಲ. ಇದೇ ಕಾರಣಕ್ಕಾಗಿಯೇ ಚುನಾವಣೆಯಲ್ಲಿ ದೇವರು ನಿಮ್ಮನ್ನು ಶಿಕ್ಷಿಸಿದ್ದಾನೆ

-ಕೆ.ಸಿ.ವೇಣುಗೋಪಾಲ್‌ ಕಾಂಗ್ರೆಸ್ ಸಂಸದ

ನಿಮ್ಮಿಂದ ನಮಗೆ ಏನೂ ಬೇಕಿಲ್ಲ. ನಮಗೆ ಏನು ಬೇಕೋ ಅದನ್ನು ಪಡೆಯುವುದಕ್ಕಾಗಿ ಹೋರಾಡುತ್ತೇವೆ. ಆದರೆ ವಿರೋಧ ಪಕ್ಷಗಳ ಬಗ್ಗೆ ವಿನಮ್ರರಾಗಿ ಎಂದು ಪ್ರಧಾನಿಗೆ ಹೇಳಲು ಇಚ್ಛಿಸುತ್ತೇವೆ. ವಿಪಕ್ಷಗಳ ಕುರಿತು ಇಷ್ಟೊಂದು ದ್ವೇಷ ಪ್ರತೀಕಾರ ಭಾವನೆ ಇಟ್ಟುಕೊಂಡು ಅದು ಹೇಗೆ ಅವರು (ಪ್ರಧಾನಿ) ನಿದ್ರಿಸುತ್ತಾರೆ? -ಕಲ್ಯಾಣ ಬ್ಯಾನರ್ಜಿ ಟಿಎಂಸಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.