ADVERTISEMENT

ಅಯೋಧ್ಯೆ, ಪ್ರಯಾಗ್‌ರಾಜ್‌ನಲ್ಲಿ ಗಣ್ಯರಿಗೆ ಅತಿಥಿ ಗೃಹ: ಸಿಎಂ ಯೋಗಿ ಆದಿತ್ಯನಾಥ್‌

ಪಿಟಿಐ
Published 21 ಜೂನ್ 2024, 14:13 IST
Last Updated 21 ಜೂನ್ 2024, 14:13 IST
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್   

ಲಖನೌ: ರಾಷ್ಟ್ರಪತಿ, ಪ್ರಧಾನಿ ಮತ್ತು ರಾಜ್ಯಪಾಲರು ಮೊದಲಾದ ಗಣ್ಯರಿಗಾಗಿ ಅಯೋಧ್ಯೆ ಮತ್ತು ಪ್ರಯಾಗ್‌ರಾಜ್‌ನಲ್ಲಿ ಅತಿಥಿ ಗೃಹಗಳನ್ನು ನಿರ್ಮಿಸಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಶುಕ್ರವಾರ ಅತಿಥಿ ಗೃಹಗಳ ನಿರ್ಮಾಣ ಸ್ಥಳ, ಸೌಲಭ್ಯ ಮತ್ತು ಇತರ ಅಂಶಗಳನ್ನು ಪರಿಶೀಲಿಸಿದರು ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ, ದೇಶದ ಪ್ರಮುಖ ಗಣ್ಯರು ಮತ್ತು ಇತರ ದೇಶಗಳ ಪ್ರಮುಖರಿಗೆ ಅಯೋಧ್ಯೆ ಮತ್ತು ಪ್ರಯಾಗರಾಜ್‌ನಲ್ಲಿ ಅತ್ಯುತ್ತಮ ಗುಣಮಟ್ಟದ ಅತಿಥಿ ಗೃಹಗಳ ಅಗತ್ಯವನ್ನು ಮುಖ್ಯಮಂತ್ರಿಗಳು ಒತ್ತಿ ಹೇಳಿದರು. ಆದಷ್ಟು ಶೀಘ್ರ ಕಾಮಗಾರಿ ಆರಂಭಿಸಬೇಕು, ಅಲ್ಲದೇ ಕಟ್ಟಡವು ರಾಮ ಮಂದಿರಕ್ಕಿಂತ ಎತ್ತರ ಇರಬಾರದು ಎಂದು ಸೂಚಿಸಿದರು. 

ADVERTISEMENT

ಅಯೋಧ್ಯೆಯ ಸರಯೂ ನದಿ ದಡದಲ್ಲಿರುವ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಜಾಗವು ಅತಿಥಿ ಗೃಹ ನಿರ್ಮಾಣಕ್ಕೆ ಸೂಕ್ತವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಅತಿಥಿ ಗೃಹವು ಸುಮಾರು ಮೂರೂವರೆ ಎಕರೆ ವಿಸ್ತೀರ್ಣ ಇರಲಿದ್ದು, ವೈಷ್ಣವ ಸಂಪ್ರದಾಯವನ್ನು ಪ್ರತಿಬಿಂಬಿಸುವ ವಾಸ್ತುಶಿಲ್ಪದ ಅಂಶಗಳನ್ನು ಒಳಗೊಂಡಿರಲಿದೆ ಎಂದು ಹೇಳಿಕೆ ತಿಳಿಸಿದೆ. 

ಅತಿಥಿ ಗೃಹಗಳಲ್ಲಿ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಎಂಬ ವಿಶೇಷ ಬ್ಲಾಕ್‌ಗಳು ಇರಬೇಕು. ಇದರಿಂದ ಪ್ರವಾಸಿಗರು ರಾಜ್ಯದ ವೈವಿಧ್ಯಮಯ ಕರಕುಶಲ ವಸ್ತುಗಳ ಕುರಿತು ತಿಳಿದುಕೊಳ್ಳಬಹುದು ಎಂದೂ ಮುಖ್ಯಮಂತ್ರಿ ಹೇಳಿದರು ಎನ್ನಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.