ಹಲ್ದ್ವಾನಿ (ಉತ್ತರಾಖಂಡ): ಇಲ್ಲಿನ ಹಲ್ದ್ವಾನಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮದರಸಾಗಳನ್ನು ಫೆ.8ರಂದು ಕೆಡವಿದ ನಂತರ ಹಿಂಸಾಚಾರ ಭುಗಿಲೆದ್ದಿದ್ದು, ಭದ್ರತೆಗಾಗಿ ಕೇಂದ್ರೀಯ ಭದ್ರತಾ ಪಡೆಯ ಮತ್ತಷ್ಟು ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸುವಂತೆ ಉತ್ತರಾಖಂಡ ಸರ್ಕಾರ ಮನವಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಸಾಚಾರ ನಡೆದ ಬನ್ಭೂಲ್ಪುರ ಪ್ರದೇಶದಲ್ಲಿ ಅರೆ ಸೇನಾಪಡೆಯ ತಲಾ 100 ಸಿಬ್ಬಂದಿ ಇರುವ ನಾಲ್ಕು ತಂಡಗಳನ್ನು ನಿಯೋಜಿಸುವಂತೆ ಮುಖ್ಯ ಕಾರ್ಯದರ್ಶಿ ರಾಧಾ ರತೂಡಿ ಅವರು ಕೇಂದ್ರ ಗೃಹ ಸಚಿವಾಲಯವನ್ನು ಕೋರಿದ್ದಾರೆ.
ಬನ್ಭೂಲ್ಪುರದಲ್ಲಿ ಕರ್ಫೂ ಇನ್ನೂ ಜಾರಿಯಲ್ಲಿದೆ. ನಗರದ ಹೊರಗಿನ ಪ್ರದೇಶಗಳಲ್ಲಿ ಕರ್ಫೂ ಹಿಂಪಡೆಯಲಾಗಿದೆ. ಸ್ಥಳದಲ್ಲಿ ಈಗಾಗಲೇ 1,100 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದರೆ ಬಿಗುವಿನ ವಾತಾವರಣ ಮುಂದುವರಿದಿದ್ದು, ಅಂಗಡಿಗಳನ್ನು ಮುಚ್ಚಲಾಗಿದೆ, ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ, ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಗುರುವಾರ ನಡೆದ ಹಿಂಸಾಚಾರದಲ್ಲಿ ಆರು ಮಂದಿ ಮೃತಪಟ್ಟು, 60 ಜನರು ಗಾಯಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.