ಪುಣೆ: ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಯಾವುದೇ ರಾಜಕೀಯ ಪಕ್ಷದೊಂದಿಗೆ ವಿಲೀನಗೊಳ್ಳುವುದಿಲ್ಲ ಎಂದು ಪಕ್ಷದ ನಾಯಕಿ ಹಾಗೂ ಸಂಸದೆ ಸುಪ್ರಿಯಾ ಸುಳೆ ಬುಧವಾರ ಹೇಳಿದ್ದಾರೆ.
ಶರದ್ ಪವಾರ್ ನಿವಾಸದಲ್ಲಿ ನಡೆದ ಎನ್ಸಿಪಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್ಸಿಪಿ ಯಾವುದೇ ರಾಜಕೀಯ ಪಕ್ಷದ ಜೊತೆ ವಿಲೀನವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಮ್ಮ ಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಭಾಗವಾಗಿ ಮುಂಬರುವ ರಾಜ್ಯಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ಎದುರಿಸಲಿದೆ ಎಂದು ಅವರು ಹೇಳಿದರು.
ಇಂದು ನಡೆದ ಪಕ್ಷದ ಸಭೆಯಲ್ಲಿ ರಾಜ್ಯಸಭೆ ಹಾಗೂ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡಲಾಯಿತು ಹಾಗೂ ಇದೇ 24ರಂದು ಪುಣೆಯಲ್ಲಿ ನಡೆಯಲಿರುವ ಇಂಡಿಯಾ ಮೈತ್ರಿಕೂಟದ ಸಮಾವೇಶದ ಬಗ್ಗೆಯೂ ಚರ್ಚೆ ಮಾಡಲಾಯಿತು ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಹೊಸ ಹೆಸರು ಹಾಗೂ ನೂತನ ಚಿಹ್ನೆಯೊಂದಿಗೆ ಮತ್ತೆ ನಾವು ಬರಲಿದ್ದೇವೆ ಎಂದು ಪುಣೆಯ ಎನ್ಸಿಪಿ ನಗರ ಘಟಕದ ಅಧ್ಯಕ್ಷ ಪ್ರಶಾಂತ್ ಜಗ್ತಾಪ್ ಹೇಳಿದರು. ಶರದ್ ಪವಾರ್ ನೇತೃತ್ವದ ಎನ್ಸಿಪಿ ಪಕ್ಷ ಕಾಂಗ್ರೆಸ್ ಜೊತೆ ವಿಲೀನವಾಗಲಿದೆ ಎಂಬ ವದಂತಿಗಳನ್ನು ಅವರು ತಳ್ಳಿಹಾಕಿದರು.
ಕಳೆದ ವರ್ಷ ಜುಲೈನಲ್ಲಿ ಅಜಿತ್ ಪವಾರ್ ಮತ್ತು ಇತರ ಶಾಸಕರು ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಸೇರಿದ ನಂತರ ಎನ್ಸಿಪಿ ಪಕ್ಷ ವಿಭಜನೆಯಾಯಿತು. ಭಾರತದ ಚುನಾವಣಾ ಆಯೋಗ ಕಳೆದ ವಾರ ಅಜಿತ್ ಪವಾರ್ ನೇತೃತ್ವದ ಗುಂಪಿಗೆ ಪಕ್ಷದ ಮೂಲ ಹೆಸರು ಎನ್ಸಿಪಿ ಹಾಗೂ ಚುನಾವಣೆ ಚಿಹ್ನೆ 'ಗಡಿಯಾರ'ವನ್ನು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.