ADVERTISEMENT

ಹಾಥರಸ್‌ ಕಾಲ್ತುಳಿತ ಪ್ರಕರಣ: ಭೋಲೆ ಬಾಬಾ, ಪ್ರಮುಖ ಆರೋಪಿಗಾಗಿ ಅಂತರರಾಜ್ಯ ಶೋಧ

ಪಿಟಿಐ
Published 5 ಜುಲೈ 2024, 9:36 IST
Last Updated 5 ಜುಲೈ 2024, 9:36 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹಾಥರಸ್‌ (ಉತ್ತರ ಪ್ರದೇಶ): ಹಾಥರಸ್‌ ಕಾಲ್ತುಳಿತ ಪ್ರಕರಣದ ಪ್ರಮುಖ ಆರೋಪಿ ದೇವಪ್ರಕಾಶ ಮಧುಕರ್‌ನನ್ನು ಪತ್ತೆಹಚ್ಚಲು ಉತ್ತರ ಪ್ರದೇಶ ಸರ್ಕಾರಿ ಏಜೆನ್ಸಿಗಳು ರಾಜ್ಯದಾದ್ಯಂತ ಮತ್ತು ನೆರೆಯ ರಾಜಸ್ಥಾನ ಮತ್ತು ಹರಿಯಾಣದಲ್ಲಿ ತೀವ್ರ ಶೋಧ ನಡೆಸಿವೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.

ಈ ಪ್ರಕರಣದಲ್ಲಿ ವಿಚಾರಣೆಗಾಗಿ ಪೊಲೀಸರು ಸೇರಿದಂತೆ ಏಜೆನ್ಸಿಗಳು ನಾರಾಯಣ ಸಾಕಾರ ವಿಶ್ವಹರಿ ಬಾಬಾ (ಭೋಲೆ ಬಾಬಾ) ಅವರನ್ನೂ ಹುಡುಕುತ್ತಿದ್ದಾರೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

ಜುಲೈ 2ರಂದು ಹಾಥರಸ್‌ನ ಫೂಲರಾಯ್‌ ಗ್ರಾಮದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಒಟ್ಟು 121 ಜನರು ಸಾವಿಗೀಡಾಗಿದ್ದರು. ಇವರಲ್ಲಿ ಹೆಚ್ಚಿನವರು ಮಹಿಳೆಯರು.

ಎಫ್‌ಐಆರ್‌ನಲ್ಲಿ 'ಮುಖ್ಯ ಸೇವಾದಾರ' (ಸತ್ಸಂಗದ ಮುಖ್ಯ ಸಂಘಟಕ) ಮಧುಕರ್‌ನನ್ನು ಮಾತ್ರ ಆರೋಪಿಯನ್ನಾಗಿ ಮಾಡಲಾಗಿದೆ. ಆದರೆ ಭೋಲೆ ಬಾಬಾ ಅವರನ್ನು ಆರೋಪಿ ಎಂದು ಉಲ್ಲೇಖಿಸಲಾಗಿಲ್ಲ. ಮಧುಕರ್ ಅಲ್ಲದೆ, ಹಲವಾರು ಅಪರಿಚಿತ ಸಂಘಟಕರ ವಿರುದ್ಧವೂ ಸಿಕಂದರಾ ರಾವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

6 ‘ಸೇವಾದಾರ’ರ ಬಂಧನ:

ಪ್ರಕರಣ ಸಂಬಂಧ ಇದುವರೆಗೆ ಇಬ್ಬರು ಮಹಿಳೆಯರು ಸೇರಿದಂತೆ 6 ಮಂದಿ ‘ಸೇವಾದಾರ’ರನ್ನು ಉತ್ತರ ಪ್ರದೇಶ ಪೊಲೀಸರು ಗುರುವಾರ ಬಂಧಿಸಿದ್ದಾರೆ. ರಾಮ್‌ ಲಡೈತೆ(50), ಉಪೇಂದ್ರ ಸಿಂಗ್ ಯಾದವ್(62), ಮೇಘ್ ಸಿಂಗ್(61), ಮುಕೇಶ್‌ ಕುಮಾರ್(38) ಮಹಿಳೆಯರಾದ ಮಂಜು ಯಾದವ್‌(30) ಹಾಗೂ ಮಂಜು ದೇವಿ(40) ಬಂಧಿತರು.

ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮುಖ್ಯ ‘ಸೇವಾದಾರ’ ಹಾಗೂ ಪ್ರಕರಣದ ಪ್ರಮುಖ ಆರೋಪಿ ದೇವಪ್ರಕಾಶ ಮಧುಕರ್ ಕುರಿತು ಸುಳಿವು ನೀಡಿದವರಿಗೆ ₹ 1 ಲಕ್ಷ ಬಹುಮಾನ ಘೋಷಿಸಲಾಗಿದೆ.

ಘಟನೆಯ ಪ್ರಮುಖಾಂಶಗಳು

  • ಕಾಲ್ತುಳಿತದಲ್ಲಿ ಮೃತಪಟ್ಟಿರುವ 121 ಜನರ ಗುರುತು ಪತ್ತೆ ಮಾಡಲಾಗಿದ್ದು, ಗುರುವಾರ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ.

  • ಮೃತರಲ್ಲಿ 112 ಮಹಿಳೆಯರು 7 ಮಕ್ಕಳು ಸೇರಿದ್ದಾರೆ.

  • ದುರಂತದ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಬ್ರಿಜೇಶ್‌ ಕುಮಾರ್ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ.

  • ನಿವೃತ್ತ ಐಎಎಸ್‌ ಅಧಿಕಾರಿ ಹೇಮಂತರಾವ್ ಹಾಗೂ ನಿವೃತ್ತ ಐಪಿಎಸ್‌ ಅಧಿಕಾರಿ ಭವೇಶಮುಕರ್ ಸಿಂಗ್‌ ಸಮಿತಿ ಸದಸ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.