ಸಿಲಿಗುರಿ (ಪಶ್ಚಿಮ ಬಂಗಾಳ): ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೇಶದಾದ್ಯಂತ ದ್ವೇಷ ಮತ್ತು ಹಿಂಸೆಯನ್ನು ಹರಡುವ ಕೆಲಸ ಮಾಡುತ್ತಿದೆ. ಬಡವರು ಮತ್ತು ಯುವಕರ ಹಿತವನ್ನು ಕಡೆಗಣಿಸಿ ಬೃಹತ್ ಕಾರ್ಪೊರೇಟ್ ಸಂಸ್ಥೆಗಳಿಗಾಗಿ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಆರೋಪಿಸಿದರು.
‘ಅಲ್ಪಾವಧಿ ನೇಮಕಾತಿಯ ಅಗ್ನಿವೀರ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರವು ಸಶಸ್ತ್ರ ಪಡೆಗಳನ್ನು ಸೇರಬಯಸಿದ್ದ ಯುವಕರನ್ನು ಅಣಕಿಸುವ ಕೆಲಸ ಮಾಡಿದೆ’ ಎಂದು ದೂರಿದರು. ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯಲ್ಲಿ ಅವರು ಸಿಲಿಗುರಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
‘ದ್ವೇಷ ಮತ್ತು ಹಿಂಸೆಯನ್ನು ದೇಶದಾದ್ಯಂತ ಹರಡಲಾಗುತ್ತಿದೆ. ಇದು ಯಾವ ಉದ್ದೇಶವನ್ನೂ ಈಡೇರಿಸುವುದಿಲ್ಲ. ದ್ವೇಷ ಹರಡುವ ಬದಲು ನಾವು ನಮ್ಮ ಯುವಕರಿಗಾಗಿ ಪ್ರೀತಿ ಮತ್ತು ನ್ಯಾಯವನ್ನು ಹರಡುವ ಕೆಲಸ ಮಾಡಬೇಕು’ ಎಂದು ಅವರು ಹೇಳಿದರು.
‘ಬಂಗಾಳಕ್ಕೆ ವಿಶೇಷ ಸ್ಥಾನ ಇದೆ. ಇದು ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಸೈದ್ಧಾಂತಿಕ ಹೋರಾಟಕ್ಕೆ ನಾಯಕತ್ವ ಒದಗಿಸಿದೆ. ಪ್ರಸಕ್ತ ಸಂದರ್ಭದಲ್ಲಿ ದ್ವೇಷದ ವಿರುದ್ಧದ ಹೋರಾಟಕ್ಕೆ ಹಾಗೂ ದೇಶವನ್ನು ಒಂದಾಗಿಸುವುದಕ್ಕೆ ದಾರಿ ತೋರಿಸುವ ಕೆಲಸ ಮಾಡುವುದು ಬಂಗಾಳ ಮತ್ತು ಬಂಗಾಳಿಗಳ ಕರ್ತವ್ಯ’ ಎಂದರು.
‘ಅಸಾಧಾರಣ ಸಂದರ್ಭ ಎದುರಾದಾಗ ಅದಕ್ಕೆ ಅಗತ್ಯವಾದ ಪ್ರತಿಕ್ರಿಯೆ ನೀಡದೆ ಇದ್ದಲ್ಲಿ ಜನ ನಿಮ್ಮನ್ನು ಯಾವತ್ತಿಗೂ ಕ್ಷಮಿಸುವುದಿಲ್ಲ’ ಎಂದು ರಾಹುಲ್ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.