ADVERTISEMENT

ಬದ್ಲಾಪುರ ಲೈಂಗಿಕ ದೌರ್ಜನ್ಯ: ಆರೋಪಿ ಶಿಂದೆ ಶವಸಂಸ್ಕಾರಕ್ಕೆ ಜಾಗ ಗುರುತಿಸಿ- HC

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣ * ಪೊಲೀಸರಿಗೆ ಬಾಂಬೆ ಹೈಕೋರ್ಟ್‌ ನಿರ್ದೇಶನ

ಪಿಟಿಐ
Published 27 ಸೆಪ್ಟೆಂಬರ್ 2024, 12:47 IST
Last Updated 27 ಸೆಪ್ಟೆಂಬರ್ 2024, 12:47 IST
-
-   

ಮುಂಬೈ: ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಅಕ್ಷಯ್‌ ಶಿಂದೆ ಶವ ಹೂಳುವುದಕ್ಕಾಗಿ ಪ್ರತ್ಯೇಕ ಸ್ಥಳವೊಂದನ್ನು ಗುರುತಿಸುವಂತೆ ಪೊಲೀಸರಿಗೆ ಬಾಂಬೆ ಹೈಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ.

ಸ್ಥಳ ಗುರುತಿಸಿದ ನಂತರ, ಅದರ ಕುರಿತು ಶಿಂದೆ ಕುಟುಂಬಕ್ಕೆ ಮಾಹಿತಿ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ–ಡೇರೆ ಹಾಗೂ ಎಂ.ಎಂ.ಸಥಾಯೆ ಅವರಿದ್ದ ವಿಭಾಗೀಯ ನ್ಯಾಯಪೀಠ ಹೇಳಿದೆ.

ಲೈಂಗಿಕ ಪ್ರಕರಣದ ಆರೋಪಿ ಅಕ್ಷಯ್‌ ಶಿಂದೆ, ಪೊಲೀಸ್‌ ಶೂಟೌಟ್‌ನಲ್ಲಿ ಕೊಲೆಯಾಗಿದ್ದು, ಮಗನ ಅಂತ್ಯಕ್ರಿಯೆಗೆ ಜಾಗ ಒದಗಿಸುವಂತೆ ಕೋರಿ ಅಕ್ಷಯ್‌ ತಂದೆ ಶುಕ್ರವಾರ ಅರ್ಜಿ ಸಲ್ಲಿಸಿದ್ದರು.

ADVERTISEMENT

ಶಿಂದೆ ಸಮುದಾಯದಲ್ಲಿ ಶವವನ್ನು ಹೂಳುವ ಪದ್ಧತಿ ಇಲ್ಲ ಎಂಬ ಪ್ರಾಸಿಕ್ಯೂಷನ್ ವಾದವನ್ನು ತಳ್ಳಿಹಾಕಿದ ಪೀಠ, ‘ಅಂತ್ಯಕ್ರಿಯೆ ಹೇಗೆ ನಡೆಸಬೇಕು ಎಂಬುದು ಅಕ್ಷಯ್‌ ಪಾಲಕರ ಆಯ್ಕೆ’ ಎಂದು ಹೇಳಿದೆ.

‘ಬದ್ಲಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಸ್ಮಶಾನಗಳಲ್ಲಿ ಶಿಂದೆ ಶವ ಹೂಳುವುದಕ್ಕೆ ಜಾಗ ನೀಡಲು ನಿರಾಕರಿಸಲಾಗುತ್ತಿದೆ. ವಿರೋಧವೂ ವ್ಯಕ್ತವಾಗುತ್ತಿದೆ. ಹೀಗಾಗಿ, ಪೊಲೀಸರೇ ಪ್ರತ್ಯೇಕ ಜಾಗ ಹುಡುಕಬೇಕು’ ಎಂದು ಸರ್ಕಾರಿ ವಕೀಲ ಹಿತೇನ್ ವೆನೆಗಾಂವಕರ್‌, ಪೀಠಕ್ಕೆ ತಿಳಿಸಿದರು.

ಶವಸಂಸ್ಕಾರ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕ್ರಮ ತೆಗೆದುಕೊಳ್ಳುವರು. ಯಾವುದೇ ಸದ್ದು– ಗದ್ದಲ ಇಲ್ಲದಂತೆ  ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಬೇಕು ಎಂದು ವೆನೆಗಾಂವಕರ್‌ ಹೇಳಿದರು.

ಇದನ್ನು ಮಾನ್ಯ ಮಾಡಿದ ಪೀಠ, ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.