ಪಣಜಿ: ಬಾಂಬೆ ಹೈಕೋರ್ಟ್ನ ಗೋವಾ ಪೀಠವು ಶುಕ್ರವಾರ ವ್ಯಕ್ತಿಯೊಬ್ಬರ ‘ಮರಣ ಇಚ್ಛೆಯ ಉಯಿಲು’ (ಲಿವಿಂಗ್ ವಿಲ್) ಕಾರ್ಯಗತಗೊಳಿಸಲು ಅನುಮತಿ ನೀಡಿದೆ.
ಇಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ, ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎಂ.ಎಸ್.ಸೋನಕ್ ಅವರು ‘ಮರಣ ಇಚ್ಛೆಯ ಉಯಿಲು’ ಪತ್ರಕ್ಕೆ ಒಪ್ಪಿಗೆ ನೀಡಿದರು.
ಈ ಮೂಲಕ ನ್ಯಾಯಮೂರ್ತಿ ಸೋನಕ್ ಅವರು, ಮಾರಣಾಂತಿಕ ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಅಳವಡಿಸಿರುವ ಜೀವ ರಕ್ಷಕ ಸಾಧನ ತೆಗೆಯುವುದಕ್ಕೆ ಸಂಬಂಧಿಸಿದ ‘ಮರಣ ಇಚ್ಛೆಯ’ ಉಯಿಲಿಗೆ ಸಮ್ಮತಿ ನೀಡಿದ ದೇಶದ ಮೊದಲ ನ್ಯಾಯಮೂರ್ತಿ ಎನಿಸಿದ್ದಾರೆ.
ಅದೇ ರೀತಿ ಗೋವಾ, ‘ಮರಣ ಇಚ್ಛೆಯ ಉಯಿಲು’ ಸೌಲಭ್ಯವನ್ನು ಅನುಷ್ಠಾನಕ್ಕೆ ತಂದ ಮೊದಲ ರಾಜ್ಯವೆನಿಸಿದೆ. ವ್ಯಕ್ತಿಯೊಬ್ಬರ ‘ಮರಣ ಇಚ್ಛೆಯ ಉಯಿಲು’ ಪತ್ರಕ್ಕೆ ಡಾ.ಸಂದೇಶ ಚೋಡನಕರ್ ಹಾಗೂ ದಿನೇಶ ಶೆಟ್ಟಿ ಎಂಬುವವರು ಸಾಕ್ಷಿಗಳಾಗಿದ್ದರು.
ಈ ವೇಳೆ ಮಾತನಾಡಿದ ನ್ಯಾಯಮೂರ್ತಿ ಸೋನಕ್, ‘ಮರಣ ಇಚ್ಛೆಯ ಉಯಿಲಿಗೆ ಸಂಬಂಧಿಸಿ ಎದುರಾಗುವ ತೊಡಕುಗಳನ್ನು ಜನರು ಅರ್ಥ ಮಾಡಿಕೊಂಡು, ನಂತರವಷ್ಟೆ ಸೂಕ್ತ ನಿರ್ಧಾರ ಕೈಗೊಳ್ಳುವುದು ಉತ್ತಮ’ ಎಂದು ಮನವಿ ಮಾಡಿದರು.
ಇದೇ ವೇಳೆ, ಮರಣ ಇಚ್ಛೆಯ ಉಯಿಲಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಒಳಗೊಂಡ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.
ನ್ಯಾಯಮೂರ್ತಿಗಳಾದ ವಾಲ್ಮೀಕಿ ಮೆನೆಜಸ್ ಹಾಗೂ ಜಿತೇಂದ್ರ ಜೈನ್, ವೈದ್ಯಕೀಯ ಸೇವೆಗಳ ನಿರ್ದೇಶನಾಲಯದ ಮುಖ್ಯ ವೈದ್ಯಾಧಿಕಾರಿ ಡಾ.ಮೇಧಾ ಸಾಲ್ಕರ್, ಐಎಂಎ ಗೋವಾ ಶಾಖೆ ಅಧ್ಯಕ್ಷ ಡಾ.ಶೇಖರ್ ಸಾಲ್ಕರ್ ಉಪಸ್ಥಿತರಿದ್ದರು.
ಮಾರಣಾಂತಿಕ ಕಾಯಿಲೆಯಿಂದ ಬಳಲುವ ವ್ಯಕ್ತಿಯು, ತನಗೆ ಅಳವಡಿಸಲಾಗಿರುವ ಜೀವ ರಕ್ಷಕ ಸಾಧನಗಳನ್ನು ತೆಗೆಯುವುದಕ್ಕೆ ಸಂಬಂಧಿಸಿ ಈ ಉಯಿಲಿನ ಮೂಲಕ ನಿರ್ದೇಶನ ನೀಡಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.