ADVERTISEMENT

ಇ.ಡಿ ಬಂಧನ ಪ್ರಶ್ನಿಸಿ ಸುಪ್ರಿಂ ಕೋರ್ಟ್ ಮೊರೆ ಹೋದ ಹೇಮಂತ್ ಸೊರೆನ್‌

ಪಿಟಿಐ
Published 6 ಮೇ 2024, 10:09 IST
Last Updated 6 ಮೇ 2024, 10:09 IST
ಹೇಮಂತ್‌ ಸೊರೆನ್‌
ಹೇಮಂತ್‌ ಸೊರೆನ್‌   

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಬಂಧನದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಜಾರ್ಖಂಡ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಮನವಿ ಮಾಡಿದ ಸೊರೆನ್ ಪರ ವಕೀಲ ಕಪಿಲ್ ಸಿಬಲ್, ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಕೋರಿದರು.

ಜೆ.ಬಿ ಪರ್ದಿವಾಲ ಹಾಗೂ ಮನೋಜ್ ಅವರೂ ಕೂಡ ಪೀಠದ ಭಾಗವಾಗಿದ್ದರು.

ADVERTISEMENT

ಮೇ 13ರಿಂದ ಜಾರ್ಖಂಡ್‌ನಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಸೊರೆನ್ ಅವರಿಗೆ ತಮ್ಮ ಪಕ್ಷ ಜೆಎಂಎಂ ಪರ ಪ್ರಚಾರ ಮಾಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

‘ಹೇಮಂತ್ ಸೊರೆನ್ ಅವರನ್ನು ಜನವರಿ 31ರಂದು ಬಂಧಿಸಲಾಗಿದೆ. ಫೆ.4ರಂದು ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌ ಫೆ. 28ರಂದು ತೀರ್ಪನ್ನು ಕಾಯ್ದಿರಿಸಿತಾದರೂ, ಪ್ರಕಟಿಸಿರಲಿಲ್ಲ. ಜಾರ್ಖಂಡ್‌ನಲ್ಲಿ ಮೇ 13ರಿಂದ ಮೊದಲ ಹಂತದ ಚುನಾವಣೆ ನಡೆಯಲಿದೆ. ಹೀಗಾಗಿ ಸಂವಿಧಾನದ 32ನೇ ವಿಧಿಯಡಿ ನಾವು ಈ ಕೋರ್ಟ್‌ಗೆ (ಸುಪ್ರೀಂ ಕೋರ್ಟ್‌) ಮನವಿ ಸಲ್ಲಿಸಿದ್ದೆವು. ಇಲ್ಲಿಂದ ನೋಟಿಸ್‌ ನೀಡಿದ ಬಳಿಕ ಸೊರೆನ್ ಅವರ ಅರ್ಜಿಯನ್ನು ತಿರಸ್ಕರಿಸಿ ಹೈಕೋರ್ಟ್ ಆದೇಶ ನೀಡಿದೆ. ಹಕ್ಕುಗಳನ್ನು ಈ ರೀತಿ ಹತ್ತಿಕ್ಕುತ್ತಿರುವುದು ದುರದೃಷ್ಟಕರ’ ಎಂದು ಸಿಬಲ್ ಪೀಠದ ಮುಂದೆ ಹೇಳಿದರು.

ಸೊರೆನ್ ಸಲ್ಲಿಸಿರುವ ಮಧ್ಯಂತರ ಜಾಮೀನಿನ ಅರ್ಜಿಯ ವಿಚಾರಣೆಯನ್ನು ಮೇ 7ರಂದು ಕೈಗೆತ್ತಿಕೊಳ್ಳುವುದಾಗಿ ಪೀಠ ಹೇಳಿತು. ಅದೇ ದಿನ ಈ ಅರ್ಜಿಯನ್ನು ವಿಚಾರಣೆ ನಡೆಸಿ ಎಂದು ಸಿಬಲ್ ಪೀಠಕ್ಕೆ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.