ADVERTISEMENT

ಪ್ರಧಾನಿ ಮೋದಿ ಬಗ್ಗೆ ಹೇಳಿಕೆ: ಅಮಿತ್‌ ಶಾ–ಖರ್ಗೆ ವಾಕ್ಸಮರ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 23:58 IST
Last Updated 30 ಸೆಪ್ಟೆಂಬರ್ 2024, 23:58 IST
   

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಸಾಯುವುದಿಲ್ಲ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಜಮ್ಮುವಿನಲ್ಲಿ ನಡೆದ ಪ್ರಚಾರ ಸಭೆಯೊಂದಲ್ಲಿ ಹೇಳಿದ್ದರು. ತಮ್ಮ ಭಾಷಣದ ವೇಳೆ ಅಸ್ವಸ್ಥರಾಗಿದ್ದ ಅವರು, ಚೇತರಿಸಿಕೊಂಡು ಬಳಿಕ ಈ ಮಾತುಗಳನ್ನಾಡಿದ್ದರು. ಖರ್ಗೆ ಅವರು ಈ ಹೇಳಿಕೆಗೆ ಬಿಜೆಪಿಯು ಸೋಮವಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಬಿಜೆಪಿ ವಿರೋಧಕ್ಕೆ ಖರ್ಗೆ ಅವರೂ ಪ್ರತಿಕ್ರಿಯಿಸಿದ್ದಾರೆ.

‘ಕೆಟ್ಟ ಅಭಿರುಚಿಯ ಮಾತು’
ಮಲ್ಲಿಕಾರ್ಜುನ ಖರ್ಗೆ ಅವರು ಭಾರಿ ಉತ್ಸಾಹದಿಂದ ಕೆಟ್ಟ ಅಭಿರುಚಿಯ ಹಾಗೂ ಅವಮಾನಕರ ರೀತಿಯ ಮಾತುಗಳನ್ನಾಡಿದ್ದಾರೆ. ಖರ್ಗೆ ಅವರ ಭಾಷಣವು, ಹೀನ ಅಭಿರುಚಿಯ ಭಾಷಣ ಮಾಡುವ ತಮ್ಮ ಪಕ್ಷದ ನಾಯಕರನ್ನು ಅದೇ ಪಕ್ಷದ ಅಧ್ಯಕ್ಷರೇ ಮೀರಿಸಿದಂತಾಗಿದೆ. ತಮ್ಮ ವೈಯಕ್ತಿಕ ಆರೋಗ್ಯದ ವಿಚಾರದಲ್ಲಿ ಅನಗತ್ಯವಾಗಿ ಪ್ರಧಾನಿ ಮೋದಿ ಅವರ ವಿಚಾರವನ್ನು ಪ್ರಸ್ತಾಪಿಸಿರುವುದು, ಖರ್ಗೆ ಅವರೊಳಗಿರುವ ಹಗೆಯನ್ನು ತೋರಿಸುತ್ತದೆ. ಪ್ರಧಾನಿ ಮೋದಿ ಅವರ ಕುರಿತು ಕಾಂಗ್ರೆಸ್‌ನವರಿಗೆ ಎಷ್ಟು ದ್ವೇಷ ಹಾಗೂ ಭಯ ಇದೆ ಎನ್ನುವುದು ಖರ್ಗೆ ಅವರ ಈ ಮಾತುಗಳಿಂದ ತಿಳಿಯುತ್ತದೆ.ಅವರ ಆರೋಗ್ಯದ ವಿಚಾರಕ್ಕೆ ಬರುವುದಾದರೆ, ಮೋದಿ ಅವರ, ನನ್ನ ಹಾಗೂ ಪಕ್ಷದವರ ಹಾರೈಕೆ ಎಂದಿಗೂ ಇದ್ದೇ ಇದೆ. 2047ರ ವಿಕಸಿತ ಭಾರತ ನಿರ್ಮಾಣವನ್ನು ಅವರು ನೋಡುವಂತಾಗಲಿ, ಅಲ್ಲಿಯವರೆಗೂ ಅವರು ಜೀವಿಸಲಿ. -ಅಮಿತ್‌ ಶಾ, ಗೃಹ ಸಚಿವ
ಅಮಿತ್‌ ಶಾ ಅವರೆ, ನೀವು ಸರಿಯಾಗಿಯೇ ಹೇಳಿದ್ದೀರಿ. ನರೇಂದ್ರ ಮೋದಿ ಅವರ ಮೇಲೆ ದ್ವೇಷ ಕಾರುವ ಯಾವ ಅವಕಾಶವನ್ನೂ ಕಾಂಗ್ರೆಸ್‌ ಬಿಟ್ಟುಕೊಡುವುದಿಲ್ಲ. ಖರ್ಗೆ ಅವರ ಭಾಷಣ ಕೂಡ ಇಂಥದ್ದೇ ಒಂದು ಅವಕಾಶ. ಖರ್ಗೆ ಅವರು ಬಹುಕಾಲ ಜೀವಿಸಲಿ ಎಂದು ನಾವೂ ಪ್ರಾರ್ಥಿಸುತ್ತೇವೆ. 2047ರ ವಿಕಸಿತ ಭಾರತವನ್ನು ಅವರು ನೋಡುವಂತಾಗಲಿ
ನಿರ್ಮಲಾ ಸೀತಾರಾಮನ್‌, ಹಣಕಾಸು ಸಚಿವೆ
ನಿರ್ಮಲಾ ಸೀತಾರಾಮನ್‌
‘ಗಂಭೀರ ವಿಚಾರಗಳತ್ತ ಗಮನಹರಿಸಿ’
ಮಣಿಪುರ, ಜನಗಣತಿ ಮತ್ತು ಜಾತಿ ಗಣತಿಯಂಥ ಗಂಭೀರ ವಿಚಾರಗಳ ಬಗ್ಗೆ ಗೃಹ ಸಚಿವ ಅಮಿತ್‌ ಶಾ ಅವರು ಗಮನ ಹರಿಸಬೇಕು. ನಗರ ಪ್ರದೇಶದ ಪೌರಕಾರ್ಮಿಕರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಒಬಿಸಿಗೆ ಸೇರಿದ ಶೇ 92ರಷ್ಟು ಜನರು ಇದ್ದಾರೆ ಎಂದು ನಿಮ್ಮ ಸರ್ಕಾರವೇ ನಡೆಸಿದ ಸಮೀಕ್ಷೆ ಹೇಳುತ್ತಿದೆ. ಬಿಜೆಪಿಯು ಜಾತಿ ಗಣತಿಯ ವಿರುದ್ಧ ಇದೆ. ಏಕೆಂದರೆ, ಜಾತಿ ಗಣತಿ ನಡೆಸಿದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಒಬಿಸಿ ಹಾಗೂ ಇಡಬ್ಲ್ಯುಎಸ್‌ ಅವರು ತಮ್ಮ ಜೀವನ ಸಾಗಿಸುವುದಕ್ಕೆ ಯಾವ ರೀತಿಯ ಉದ್ಯೋಗ ಮಾಡುತ್ತಿದ್ದಾರೆ ಎಂದು ತಿಳಿದುಬಿಡು ತ್ತದೆ. ಈ ವರ್ಗದವರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿ ಏನು? ಇವರಿಗೆ ಸರ್ಕಾರವು ಯಾವೆಲ್ಲಾ ಯೋಜನೆಗಳನ್ನು ಒದಗಿಸಿದೆ ಎಂಬುದೂ ತಿಳಿದುಬಿಡುತ್ತದೆ. ಇದಕ್ಕಾಗಿಯೇ ಬಿಜೆಪಿ ವಿರೋಧಿಸುತ್ತಿದೆ. ಆದರೆ, ಕಾಂಗ್ರೆಸ್‌ ಪಕ್ಷವು ಜಾತಿ ಗಣತಿಯನ್ನು ನಡೆಸಿಯೇ ನಡೆಸುತ್ತದೆ. ಈ ಬಗ್ಗೆ ಪಕ್ಷಕ್ಕೆ ಸ್ಪಷ್ಟ ಗುರಿಯಿದೆ.-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.