ADVERTISEMENT

ತಮಿಳುನಾಡಿನಲ್ಲಿ ಕ್ರೈಸ್ತ ಮತಾಂತರ ಚಟುವಟಿಕೆ ಗಂಭೀರವಾದದ್ದು: ಆರ್‌ಎಸ್‌ಎಸ್‌

ಪಿಟಿಐ
Published 2 ಸೆಪ್ಟೆಂಬರ್ 2024, 12:39 IST
Last Updated 2 ಸೆಪ್ಟೆಂಬರ್ 2024, 12:39 IST
<div class="paragraphs"><p>ಕೇರಳದ ಪಾಲಕ್ಕಾಡ್‌ನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹವರ್ತಿ ಸಂಘಟನೆಗಳ ವಾರ್ಷಿಕ ಸಮಾವೇಶ</p></div>

ಕೇರಳದ ಪಾಲಕ್ಕಾಡ್‌ನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹವರ್ತಿ ಸಂಘಟನೆಗಳ ವಾರ್ಷಿಕ ಸಮಾವೇಶ

   

ಪಿಟಿಐ ಚಿತ್ರ

ಪಾಲಕ್ಕಾಡ್: ‘ತಮಿಳುನಾಡಿನಲ್ಲಿ ಕ್ರೈಸ್ತ ಮತಾಂತರ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಿರುವುದು ಕಳವಳಕಾರಿ ಘಟನೆಯಾಗಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಸ್ಥೆ ಇದನ್ನು ಗಂಭೀರವಾಗಿ ಪರಿಗಣಿಸಲಿದೆ’ ಎಂದು ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ ಹೇಳಿದ್ದಾರೆ.

ADVERTISEMENT

ಸೋಮವಾರ ಕೊನೆಗೊಂಡ ಮೂರು ದಿನಗಳ ಆರ್‌ಎಸ್‌ಎಸ್‌ನ ಸಹವರ್ತಿ ಸಂಘಟನೆಗಳ ವಾರ್ಷಿಕ ಸಮಾವೇಶ ‘ಸಮನ್ವಯ ಬೈಠಕ್’ ಕುರಿತು ಅವರು ಮಾಹಿತಿ ನೀಡಿದರು.

‘ತಮಿಳುನಾಡಿನಲ್ಲಿ ಮಿಷನರಿಗಳು ನಡೆಸುತ್ತಿರುವ ಮತಾಂತರ ಪ್ರಕ್ರಿಯೆಗಳು ವ್ಯಾಪಕವಾಗಿವೆ. ಆರ್‌ಎಸ್‌ಎಸ್ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಬರಲಿರುವ ದಿನಗಳಲ್ಲಿ ಇದರ ಸಂಪೂರ್ಣ ಮಾಹಿತಿ ಪಡೆಯಲಾಗುವುದು’ ಎಂದಿದ್ದಾರೆ.

ಬಾಂಗ್ಲಾದೇಶದಲ್ಲಿರುವ ಹಿಂದೂ ಸಹಿತ ಅಲ್ಪಸಂಖ್ಯಾತರ ರಕ್ಷಣೆಗೆ ಅಗತ್ಯ

‘ನೆರೆಯ ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಸೃಷ್ಟಿಯಾದ ಅರಾಜಕತೆಯಲ್ಲಿ ಅಲ್ಪಸಂಖ್ಯಾತ ಹಿಂದೂ, ಸಿಖ್ ಹಾಗೂ ಇತರ ಸಮುದಾಯಗಳ ಮೇಲೆ ನಿರಂತರ ದಾಳಿ ನಡೆದಿದ್ದು, ಅವರಿಗೆ ರಕ್ಷಣೆ ನೀಡಲು ಅಲ್ಲಿನ ಆಡಳಿತದ ಮೇಲೆ ಒತ್ತಡ ತರಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಲಾಗುವುದು’ ಎಂದು ಅಂಬೇಕರ್ ಹೇಳಿದ್ದಾರೆ.

‘ಬಾಂಗ್ಲಾದೇಶದ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾದದ್ದು. ಬಾಂಗ್ಲಾದೇಶದಲ್ಲಿರುವ ಹಿಂದೂಗಳು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ ರಕ್ಷಣೆಗೆ ಸಂಬಂಧಿಸಿದಂತೆ ಅಲ್ಲಿನ ಆಡಳಿತದೊಂದಿಗೆ ಮಾತುಕತೆ ನಡೆಸುವಂತೆ ಈಗಾಗಲೇ ಪ್ರಧಾನಿ ಅವರಲ್ಲಿ ಕೇಳಿಕೊಳ್ಳಲಾಗಿದೆ’ ಎಂದಿದ್ದಾರೆ.

ಮೀಸಲಾತಿ ವಿಷಯವಾಗಿ ಬಾಂಗ್ಲಾದೇಶದಲ್ಲಿ ಜುಲೈನಿಂದ ಅರಾಜಕತೆ ಸೃಷ್ಟಿಯಾಗಿತ್ತು. ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರು ಆಗಸ್ಟ್ 5ರಂದು ದೇಶ ತೊರಿದ್ದರು. ಅವರು ಬೇರೆಡೆ ಆಶ್ರಯ ಪಡೆದಿದ್ದಾರೆ. ಸದ್ಯ ಮಧ್ಯಂತರ ಆಡಳಿತ ರಚನೆಯಾಗಿದ್ದು, ಇನ್ನಷ್ಟೇ ಚುನಾವಣೆ ನಡೆಯಬೇಕಿದೆ.

ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ದೊರಕಿಸಿ

‘ಪಶ್ಚಿಮ ಬಂಗಾಳದಲ್ಲಿ ವೈದ್ಯೆಯೊಬ್ಬರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಅತ್ಯಂತ ದುರದೃಷ್ಟಕರವಾಗಿದ್ದು, ಮಹಿಳೆಯರ ಮೇಲಿನ ಇಂಥ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಶಿಕ್ಷೆ ವಿಧಿಸಲು ಅನುವಾಗುವಂತೆ ಕಾನೂನು ಬದಲಿಸುವುದು ತೀರಾ ಅಗತ್ಯವಾಗಿದೆ’ ಎಂದು ಅಂಬೇಕರ್ ಹೇಳಿದ್ದಾರೆ.

‘ಮಹಿಳೆಯರ ಮೇಲೆ ಇಂಥ ಘಟನೆ ಸಂಭವಿಸಿದಾಗ ತ್ವರಿತ ನ್ಯಾಯದಾನ ಪ್ರಕ್ರಿಯೆ ನಡೆಯಲು ಅನುಕೂಲವಾಗುವಂತ ವ್ಯವಸ್ಥೆಯನ್ನು ನಿರ್ಮಿಸಬೇಕಿದೆ’ ಎಂದಿದ್ದಾರೆ.

ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆ. 9ರಂದು ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಡೆದಿತ್ತು. ಈ ಕುರಿತು ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದ್ದು, ಇಂದಿಗೂ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಒಬ್ಬ ಆರೋಪಿಯನ್ನು ಈವರೆಗೂ ಬಂಧಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.