ಶಿಮ್ಲಾ: ಬುಧವಾರ ರಾತ್ರಿ ಸಂಭವಿಸಿದ ಧಿಡೀರ್ ಮೇಘಸ್ಫೋಟದಿಂದ ಹಾನಿಗೊಳಗಾಗಿದ್ದ ಮನಾಲಿ–ಲೆಹ್ ರಾಷ್ಟ್ರೀಯ ಹೆದ್ದಾರಿ–3 ಅನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿರುವ ಅಂಜನಿ ಮಹಾದೇವ್ ದೇವಸ್ಥಾನದ ಪಕ್ಕದಲ್ಲಿನ ಸಣ್ಣ ಜಲಪಾತದ ಹತ್ತಿರದಲ್ಲಿ ಬುಧವಾರ ರಾತ್ರಿ ವೇಳೆ ದಿಢೀರ್ ಮೇಘಸ್ಫೋಟ ಸಂಭವಿಸಿತ್ತು. ಇದರಿಂದಾಗಿ ಪ್ರವಾಹ ಉಂಟಾಗಿದ್ದು ಲೇಹ್–ಮನಾಲಿ ರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ 3) ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಗುರುವಾರ ಸಂಜೆಯಿಂದ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಗಡಿ ರಸ್ತೆ ಸಂಸ್ಥೆಯ (ಬಿಆರ್ಒ) ಅಧಿಕಾರಿಗಳು ತಿಳಿಸಿದ್ದಾರೆ.
ಮೇಘಸ್ಫೋಟದಿಂದಾಗಿ ಮೂರು ಮನೆಗಳು ಕೊಚ್ಚಿ ಹೋಗಿದ್ದು, ಒಂದು ಮನೆಗೆ ಹಾನಿಯಾಗಿದೆ. ನಾಲ್ಕು ಕುಟುಂಬಗಳು ಮನೆ ಕಳೆದುಕೊಂಡು ನಿರಾಶ್ರಿತವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯದ 8 ಜಿಲ್ಲೆಗಳಲ್ಲಿ ಜುಲೈ 30ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಶಿಮ್ಲಾ ಹವಾಮಾನ ಕಚೇರಿ ತಿಳಿಸಿದೆ. ಜಿಲ್ಲೆಗಳಿಗೆ ‘ಯೆಲ್ಲೊ’ ಅಲರ್ಟ್ ಘೋಷಿಸಿದೆ.
ರಾಜ್ಯದಲ್ಲಿ ಜೂನ್ 27ರಂದು ಮಾನ್ಸೂನ್ ಪ್ರಾರಂಭವಾದಾಗಿನಿಂದ ಈವರೆಗೆ ಮಳೆ ಸಂಬಂಧಿತ ಅವಘಡಗಳಲ್ಲಿ ಸುಮಾರು 51 ಜನರು ಮೃತಪಟ್ಟಿದ್ದಾರೆ. ₹390 ಕೋಟಿಯಷ್ಟು ಆಸ್ತಿ–ಪಾಸ್ತಿ ನಷ್ಟವಾಗಿದೆ ಎಂದು ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.