ತಿರುವನಂತಪುರ: ‘ವನ್ಯಜೀವಿಯೊಂದಿಗಿನ ಸಂಘರ್ಷದಿಂದಾಗಿ ಸಂಭವಿಸುವ ಮನುಷ್ಯರ ಸಾವಿನ ಪ್ರಮಾಣದಲ್ಲಿ ಕಳೆದ ಮೂರು ವರ್ಷದಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗಿದೆ’ ಎಂದು ಕೇರಳದ ಅರಣ್ಯ ಇಲಾಖೆ ಬಿಡುಗಡೆ ಮಾಡಿರುವ ಇತ್ತೀಚಿನ ಮಾಹಿತಿ ತಿಳಿಸಿದೆ.
ವಯನಾಡ್ ಸೇರಿದಂತೆ ಕೇರಳದಲ್ಲಿ ಸಂಭವಿಸುವ ಮಾನವ– ವನ್ಯಜೀವಿ ಸಂಘರ್ಷವು ಜನರ ಜೀವಕ್ಕೆ ಮತ್ತು ಆಸ್ತಿಗೆ ಹಾನಿಯುಂಟುಮಾಡುವ ಆತಂಕ ಒಡ್ಡಿದೆ ಎಂದು ಹೇಳಿ, ಪ್ರತಿಭಟನೆಗಳು ಹೆಚ್ಚುತ್ತಿರುವ ಬೆನ್ನಲ್ಲೇ ಈ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ.
2021–22ನೇ ಸಾಲಿಗೆ ಹೋಲಿಸಿದರೆ, 2023–24ರಲ್ಲಿ ಕೇರಳದಲ್ಲಿ ಆನೆ ದಾಳಿಗಳಿಂದ ಮೃತಪಟ್ಟವರ ಸಂಖ್ಯೆ ಕಡಿಮೆ ಇದೆ. 2023–24ರಲ್ಲಿ ಆನೆ ದಾಳಿಯಿಂದಾಗಿ 17 ಮಂದಿ ಮೃತಪಟ್ಟರೆ, 2022–23ರಲ್ಲಿ 27 ಮಂದಿ ಮೃತಪಟ್ಟಿದ್ದಾರೆ. 2021–22ರಲ್ಲಿ 35 ಮಂದಿ ಸಾವಿಗೀಡಾಗಿದ್ದಾರೆ ಎಂದೂ ಮಾಹಿತಿ ತಿಳಿಸಿದೆ.
ಮಾನವ– ವನ್ಯಜೀವಿ ಸಂಘರ್ಷದ ಕುಖ್ಯಾತಿಗೆ ಒಳಗಾಗಿರುವ ಒಡಿಶಾ, ಜಾರ್ಖಂಡ್ ಹಾಗೂ ಕರ್ನಾಟಕಕ್ಕೆ ಹೋಲಿಸಿದರೆ, ಕೇರಳದಲ್ಲಿ ಮೃತಪಟ್ಟವರ ಸಂಖ್ಯೆ ಕಡಿಮೆಯೇ ಇದೆ.
‘ಜಾರ್ಖಂಡ್ನ ಅರಣ್ಯ ಇಲಾಖೆ ಮೂಲಗಳ ಪ್ರಕಾರ, ಆನೆ ದಾಳಿಯಿಂದ ಕಳೆದ ಐದು ವರ್ಷಗಳಲ್ಲಿ ಸರಾಸರಿ 100 ಮಂದಿ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಇಷ್ಟೇ ಅವಧಿಯಲ್ಲಿ ಆನೆ ದಾಳಿಯಿಂದ 148 ಮಂದಿ ಮೃತಪಟ್ಟಿದ್ದಾರೆ. ಕಳೆದ ಐದು ವರ್ಷದಲ್ಲಿ ಒಡಿಶಾ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಕ್ರಮವಾಗಿ 499, 385 ಮತ್ತು 358 ಮಂದಿ ಸಾವಿಗೀಡಾಗಿದ್ದಾರೆ’ ಎಂದೂ ಮಾಹಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.