ADVERTISEMENT

ಮಾನವ–ವನ್ಯಜೀವಿ ಸಂಘರ್ಷ; ಕೇರಳ ಸರ್ಕಾರ ತ್ವರಿತವಾಗಿ ಪ್ರತಿಕ್ರಿಯಿಸಲಿ: ಭೂಪೇಂದರ್‌

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 15:56 IST
Last Updated 22 ಫೆಬ್ರುವರಿ 2024, 15:56 IST
ಭೂಪೇಂದರ್‌ ಯಾದವ್‌
ಭೂಪೇಂದರ್‌ ಯಾದವ್‌   

ನವದೆಹಲಿ: ವನ್ಯಜೀವಿಗಳು ಜನವಾಸ ಪ್ರದೇಶಕ್ಕೆ ಬಂದಾಗ ಮನುಷ್ಯರ ಜೀವ ಉಳಿಸಲು ಮತ್ತು ಪ್ರಾಣಿಗಳಿಗೆ ರಕ್ಷಣೆ ನೀಡಲು ಕೇರಳ ಸರ್ಕಾರವು ತುರ್ತಾಗಿ ಪ್ರತಿಕ್ರಿಯಿಸಬೇಕು ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್‌ ಯಾದವ್‌ ಗುರುವಾರ ಒತ್ತಾಯಿಸಿದರು.

ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹೆಚ್ಚಿರುವ ಕೇರಳದ ವಯನಾಡ್‌ಗೆ ಭೇಟಿ ನೀಡಿ ಬಳಿಕ ಮಾತನಾಡಿದ ಸಚಿವರು, ‘ಮಾನವ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷವನ್ನು ತಗ್ಗಿಸುವ ನಿಟ್ಟಿನಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಮಾರ್ಗದರ್ಶನ ನೀಡಲು, ಕೊಯಮತ್ತೂರಿನ ಸಲೀಂ ಅಲಿ ಪಕ್ಷಿ ವಿಜ್ಞಾನ ಮತ್ತು ನೈಸರ್ಗಿಕ ಇತಿಹಾಸ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ‌ತಿಳಿಸಿದರು.

ವನ್ಯಜೀವಿಗಳ ವಿಚಾರದಲ್ಲಿ ದಕ್ಷಿಣದ ಎಲ್ಲಾ ರಾಜ್ಯಗಳು ಪರಸ್ಪರ ಸಹಕಾರದಿಂದ ವರ್ತಿಸಬೇಕು. ಕೇಂದ್ರ ಸರ್ಕಾರವು ಅಂತರರಾಜ್ಯ ಸಮನ್ವಯ ಸಭೆ ನಡೆಸಲಿದೆ ಎಂದು ಹೇಳಿದರು.

ADVERTISEMENT

ವನ್ಯಜೀವಿಗಳು ಜನವಾಸ ಪ್ರದೇಶಗಳಿಗೆ ಬರುವಾಗ ಎಚ್ಚರಿಕೆ ನೀಡುವ ವ್ಯವಸ್ಥೆ ಮತ್ತು ಅವುಗಳ ಜಾಡುಗಳನ್ನು ಪತ್ತೆಹಚ್ಚುವ ಆಧುನಿಕ ತಂತ್ರಜ್ಞಾನ ಅಳವಡಿಸುವುದಕ್ಕೆ ಸಹಕಾರ ನೀಡಲಾಗುವುದು ಎಂದು ಸಚಿವರು ‘ಎಕ್ಸ್‌’ ವೇದಿಕೆಯಲ್ಲಿ ಹೇಳಿದ್ದಾರೆ.

ಆನೆಗಳು ಬರದಂತೆ ತಡೆ ಬೇಲಿ ನಿರ್ಮಿಸಲು ಹಾಗೂ ಇತರ ಯೋಜನೆಗಳಿಗಾಗಿ ಕೇಂದ್ರ ಸರ್ಕಾರವು 2023–24ನೇ ಹಣಕಾಸು ವರ್ಷದಲ್ಲಿ ಕೇರಳಕ್ಕೆ ₹15.82 ಕೋಟಿ ಮಂಜೂರು ಮಾಡಿದೆ ಎಂದರು.

ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಕಾರಿಡಾರ್‌ ನಿರ್ವಹಣಾ ಯೋಜನೆಗೆ ಕೇಂದ್ರ ಸರ್ಕಾರವು ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.

ವಯನಾಡ್‌ನಲ್ಲಿ ವನ್ಯಜೀವಿಗಳ ದಾಳಿಯಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರನ್ನು ಸಚಿವರು ಭೇಟಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.