ADVERTISEMENT

ಹಿಮಂತ, ಮಿಲಿಂದ ರೀತಿಯ ನಾಯಕರು ಕಾಂಗ್ರೆಸ್‌ ತೊರೆಯಲಿ: ರಾಹುಲ್‌ ಗಾಂಧಿ

ಪಿಟಿಐ
Published 2 ಫೆಬ್ರುವರಿ 2024, 15:28 IST
Last Updated 2 ಫೆಬ್ರುವರಿ 2024, 15:28 IST
<div class="paragraphs"><p>ರಾಹುಲ್‌ ಗಾಂಧಿ</p></div>

ರಾಹುಲ್‌ ಗಾಂಧಿ

   

ಬಹರಂಪುರ : ಕಾಂಗ್ರೆಸ್‌ನಿಂದ ನಾಯಕರು ನಿರ್ಗಮಿಸುತ್ತಿರುವ ಸರಣಿಯ ನಡುವೆ, ಹಿಮಂತ ಬಿಸ್ವ ಶರ್ಮ ಮತ್ತು ಮಿಲಿಂದ್ ದೇವರ ಅವರಂತಹವರು ಪಕ್ಷದ ಸಿದ್ಧಾಂತಕ್ಕೆ ಹೊಂದಿಕೆಯಾಗದ ಕಾರಣ ಪಕ್ಷದಿಂದ ದೂರವಾಗಲಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಗುರುವಾರ ರಾತ್ರಿ ಪಕ್ಷದ ‘ಡಿಜಿಟಲ್ ಮಾಧ್ಯಮ ಸೇನಾನಿ’ಗಳನ್ನು ‌ಉದ್ದೇಶಿಸಿ ಮಾತನಾಡಿದ ರಾಹುಲ್, ಕಾಂಗ್ರೆಸ್ ಎತ್ತಿಹಿಡಿದ ತತ್ವಸಿದ್ಧಾಂತಗಳನ್ನು ರಕ್ಷಿಸುವ ಬದ್ಧತೆಯನ್ನು ಒತ್ತಿಹೇಳಿದರು.

ADVERTISEMENT

‘ಹಿಮಂತ ಮತ್ತು ಮಿಲಿಂದ್ ಅವರಂತಹ ನಾಯಕರು ನಮ್ಮ ಪಕ್ಷದಿಂದ ನಿರ್ಗಮಿಸಬೇಕು. ಇದನ್ನು ನಾನು ಸಂಪೂರ್ಣ ಒಪ್ಪುತ್ತೇನೆ. ಹಿಮಂತ ಅವರು ನಿರ್ದಿಷ್ಟ ರೀತಿಯ ರಾಜಕೀಯವನ್ನು ಪ್ರತಿನಿಧಿಸುತ್ತಾರೆ, ಅದು ಕಾಂಗ್ರೆಸ್ ಪಕ್ಷದ ರಾಜಕೀಯವಲ್ಲ’ ಎಂದು ಅವರು ಹೇಳಿದರು.

‘ಹಿಮಂತ ಅವರು ಮುಸ್ಲಿಮರ ಬಗ್ಗೆ ನೀಡಿರುವ ಕೆಲವು ಹೇಳಿಕೆಗಳನ್ನು ನೀವು ಕೇಳಿದ್ದೀರಾ? ನಾನು ಅವರೊಂದಿಗೆ ಯಾವ ಚರ್ಚೆಯನ್ನೂ ಮಾಡಲು ಬಯಸುವುದಿಲ್ಲ’ ಎಂದು ರಾಹುಲ್‌ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಧಾರ್ಮಿಕವಾಗಿ ವಿಭಜನೆ ಮಾಡಲು ಬಿಜೆಪಿಯು ಬಳಸುತ್ತಿರುವ ಸಾಧನವಾಗಿದೆ ಎಂದು ಖಂಡಿಸಿದ ರಾಹುಲ್‌, ‘ಬಿಜೆಪಿಯವ ಮೂಲ ಕಲ್ಪನೆಯು ದೇಶವನ್ನು ವಿಭಜಿಸುವುದು ಮತ್ತು ಧಾರ್ಮಿಕ ಸಮುದಾಯಗಳ ನಡುವೆ ಉದ್ವಿಗ್ನತೆ ಸೃಷ್ಟಿಸುವುದಾಗಿದೆ’ ಎಂದು ಹೇಳಿದರು.

ಮಾಜಿ ಕೇಂದ್ರ ಸಚಿವ ಮತ್ತು ಮುಂಬೈ ದಕ್ಷಿಣದ ಮಾಜಿ ಸಂಸದ ಮಿಲಿಂದ್ ದೇವರ ಅವರು ಕಳೆದ ತಿಂಗಳು ಕಾಂಗ್ರೆಸ್‌ ತೊರೆದು,  ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಸೇರಿ ಹೊಸ ರಾಜಕೀಯ ಪಯಣ ಆರಂಭಿಸಿದ್ದಾರೆ. ಹಿಮಂತ ಬಿಸ್ವ ಶರ್ಮ ಅವರು 2014ರ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ, ಸದ್ಯ ಅಸ್ಸಾಂ ಮುಖ್ಯಮಂತ್ರಿಯಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.