ADVERTISEMENT

ಲೈಂಗಿಕ ಕಿರುಕುಳ ಆರೋಪ: ಜಾನಿ ಮಾಸ್ಟರ್‌ ರಾಷ್ಟ್ರೀಯ ಪ್ರಶಸ್ತಿ ಅಮಾನತು

ಪಿಟಿಐ
Published 6 ಅಕ್ಟೋಬರ್ 2024, 15:44 IST
Last Updated 6 ಅಕ್ಟೋಬರ್ 2024, 15:44 IST
ಜಾನಿ ಮಾಸ್ಟರ್
ಜಾನಿ ಮಾಸ್ಟರ್   

ನವದೆಹಲಿ: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ಗೆ ಘೋಷಿಸಲಾಗಿದ್ದ ರಾಷ್ಟ್ರೀಯ ಪ್ರಶಸ್ತಿಯನ್ನು ಅಮಾನತ್ತಿನಲ್ಲಿರಿಸಿ ವಾರ್ತಾ ಹಾಗೂ ಪ್ರಸಾರ ಖಾತೆ ಸಚಿವಾಲಯದ ರಾಷ್ಟ್ರೀಯ ಪ್ರಶಸ್ತಿ ಘಟಕವು ನಿರ್ಧಾರ ತೆಗೆದುಕೊಂಡಿದೆ.

70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭವು ನವದೆಹಲಿಯ ವಿಜ್ಞಾನ ಭವನದಲ್ಲಿ ಮಂಗಳವಾರ ನಡೆಯಲಿದೆ. ಅದಕ್ಕೂ ಎರಡು ದಿನಗಳ ಮುಂಚೆಯೇ, ಜಾನಿ ಮಾಸ್ಟರ್‌ಗೆ ನೀಡಿದ್ದ ಆಹ್ವಾನವನ್ನು ಇಲಾಖೆಯ ಅಧಿಕಾರಿಗಳು ಹಿಂದಕ್ಕೆ ಪಡೆದಿದ್ದಾರೆ.

ಜಾನಿ ಮಾಸ್ಟರ್ ನಿಜವಾದ ಹೆಸರು ಶೇಕ್ ಜಾನಿ ಬಾಷಾ ಎಂಬುದಾಗಿದ್ದು, ‘ತಿರುಚಿತ್ರಂಬಲಂ’ನ ಚಿತ್ರದ ‘ಮೇಘಮ್ ಕರುಕ್ಕಥಾ’ ಹಾಡಿಗೆ ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ನೃತ್ಯ ನಿರ್ದೇಶಕ ಸತೀಶ್ ಕೃಷ್ಣನ್ ಅವರೊಂದಿಗೆ ಜಾನಿ ಮಾಸ್ಟರ್ ಪ್ರಶಸ್ತಿ ಹಂಚಿಕೊಂಡಿದ್ದರು.

ADVERTISEMENT

ಆರೋಪ ಏನು..?

ಜತೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸೆ.15ರಂದು ಜಾನಿ ಮಾಸ್ಟರ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಸೆ. 19ರಂದು ಅವರನ್ನು ಸೈಬರಾಬಾದ್‌ ಪೊಲೀಸರು ಗೋವಾದಲ್ಲಿ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಆದರೆ, ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಿದ್ದು, ಸ್ವೀಕಾರ ಸಮಾರಂಭಕ್ಕೆ ತೆರಳಲು ಅವಕಾಶ ನೀಡುವಂತೆ ಕೋರಿ ಜಾನಿ ಮಾಸ್ಟರ್‌ ಸಲ್ಲಿಸಿದ್ದ ಅರ್ಜಿ ಪರಿಗಣಿಸಿದ್ದ ಸ್ಥಳೀಯ ನ್ಯಾಯಾಲಯವು ಗುರುವಾರ ಮಧ್ಯಂತರ ಜಾಮೀನು ನೀಡಿತ್ತು.

ಮೊದಲ ಬಾರಿ ಲೈಂಗಿಕ ದೌರ್ಜನ್ಯ ನಡೆದಾಗ ತಾನು ಬಾಲಕಿಯಾಗಿದ್ದೆ ಎಂದು ದೂರುದಾರೆ ಆರೋಪಿಸಿರುವುದರಿಂದ ಜಾನಿ ಮಾಸ್ಟರ್‌ ವಿರುದ್ಧ ಪೋಕ್ಸೊ ಪ್ರಕರಣವೂ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.