ಘಟಾಲ್(ಪ.ಬಂಗಾಳ): ಇಂಡಿಯಾ ಬಣದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ಇಂಡಿಯಾ ಮೈತ್ರಿಕೂಟದಲ್ಲಿ ಪ್ರಧಾನಿ ಹುದ್ದೆಗೆ ಏರಬಲ್ಲ ಸೂಕ್ತ ನಾಯಕನಿಲ್ಲ ಎಂದರು.
ಘಟಾಲ್ನಲ್ಲಿ ನಡೆದ ಚುನಾವಣಾ ಪ್ರಚಾರದ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಐದು ವರ್ಷಕ್ಕೆ ಐವರನ್ನು ಪ್ರಧಾನಿ ಮಾಡುವ ಗುರಿಯನ್ನು ‘ಇಂಡಿಯಾ’ ನಾಯಕರು ಹೊಂದಿದ್ದಾರೆ. ದೇಶವನ್ನು ಮುನ್ನೆಡೆಸುವ ಒಬ್ಬ ನಾಯಕನನ್ನಾಗಲಿ, ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಉದ್ದೇಶವನ್ನಾಗಲಿ ಇಂಡಿಯಾ ಒಕ್ಕೂಟ ಹೊಂದಿಲ್ಲ’ ಎಂದರು.
‘ತನ್ನ ಮಗಳು ಮುಖ್ಯಮಂತ್ರಿಯಾಗಬೇಕೆಂದು ಶರದ್ ಪವಾರ್ ಬಯಸುತ್ತಾರೆ. ಮಮತಾ ಬ್ಯಾನರ್ಜಿ ಅವರು ತಮ್ಮ ಸೋದರಳಿಯ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಾರೆ. ಸ್ಟಾಲಿನ್ ತಮ್ಮ ಮಗ ತನ್ನ ಉತ್ತರಾಧಿಕಾರಿಯಾಗುವುದನ್ನು ನೋಡಲು ಬಯಸುತ್ತಾರೆ. ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಸೋನಿಯಾ ಗಾಂಧಿ ಬಯಸುತ್ತಾರೆ. ಮೋದಿ ಅವರು ಮಾತ್ರ ಇಡೀ ದೇಶವನ್ನು ತನ್ನ ಕುಟುಂಬ ಎಂದು ನೋಡುತ್ತಾರೆ’ ಎಂದು ಹೇಳಿದರು.
‘ಪಾಕಿಸ್ತಾನದ ಬಳಿ ಅಣುಬಾಂಬ್ ಇದ್ದು, ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತನಾಡಬಾರದೆಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಪಾಕ್ ಆಕ್ರಮಿತ ಕಾಶ್ಮೀರವು ಭಾರತದ ಭಾಗವಾಗಿತ್ತು. ಅದನ್ನು ನಾವು ಹಿಂದಕ್ಕೆ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.