ನವದೆಹಲಿ: ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವ ನರೇಂದ್ರ ಮೋದಿ ಅವರನ್ನು ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ ಅಭಿನಂದಿಸಿದ್ದು, ಅದಕ್ಕೆ ಮೋದಿಯವರು ಪ್ರತಿಕ್ರಿಯಿಸಿದ್ದಾರೆ. ಇದು ಎರಡೂ ದೇಶಗಳ ನಡುವಿನ ಮನಸ್ತಾಪವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆಶಾಭಾವ ಮೂಡಿಸಿದೆ.
‘ಪರಸ್ಪರರ ಹಿತಾಸಕ್ತಿಗಳ ಬಗೆಗಿನ ಗೌರವ ಮತ್ತು ತಿಳಿವಳಿಕೆಯೊಂದಿಗೆ ಒಟ್ಟಾವದ ಜತೆ ಕೆಲಸ ಮಾಡಲು ನವದೆಹಲಿಯು ಎದುರು ನೋಡುತ್ತಿದೆ’ ಎಂದು ಮೋದಿ ಅವರು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದರು.
ಬ್ರಿಟಿಷ್ ಕೊಲಂಬಿಯಾದಲ್ಲಿ ನಡೆದ ಖಾಲಿಸ್ತಾನಿ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯಲ್ಲಿ ಭಾರತದ ಏಜೆಂಟರ ಕೈವಾಡವಿದೆ ಎಂದು ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಟ್ರೂಡೊ ಆರೋಪಿಸಿದ್ದರು. ‘ಆರೋಪ ಅಸಂಬದ್ಧ’ ಎಂದಿದ್ದ ಭಾರತ, ಕೆನಡಾದ ವಾದವನ್ನು ನಿರಾಕರಿಸಿತ್ತು. ಅದು ಭಾರತ ಮತ್ತು ಕೆನಡಾ ನಡುವೆ ಸಂಬಂಧ ಹಳಸಲು ಕಾರಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.