ನವದೆಹಲಿ: ಮಾಲ್ದೀವ್ಸ್ನಲ್ಲಿ ನಿಯೋಜಿಸಲಾಗಿರುವ ಭಾರತೀಯ ಸೇನಾ ಸಿಬ್ಬಂದಿಯ ಬದಲಿಗೆ, ನುರಿತ ತಾಂತ್ರಿಕ ಸಿಬ್ಬಂದಿ ಕಳುಹಿಸಲು ಭಾರತ ನಿರ್ಧರಿಸಿದೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ದ್ವೀಪರಾಷ್ಟ್ರ ಮಾಲ್ದೀವ್ಸ್ ತನ್ನ ಪಾಲುದಾರ ರಾಷ್ಟ್ರವಾಗಿದೆ ಎಂದೂ ಪ್ರತಿಪಾದಿಸಿದೆ.
ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ವಿಷಯವನ್ನು ತಿಳಿಸಿದರು.
ಸೇನಾ ಸಿಬ್ಬಂದಿಗೆ ಸಂಬಂಧಿಸಿದ ವಿಷಯ ಚರ್ಚಿಸಲು ಉನ್ನತಾಧಿಕಾರ ಸಮಿತಿಯ ಎರಡನೇ ಸಭೆ ಇಲ್ಲಿ ನಡೆಯಿತು.
‘ಭಾರತಿಯ ಸೇನೆಯ ಒಂದು ತಂಡವನ್ನು ಮಾರ್ಚ್ 10ರೊಳಗೆ, ಉಳಿದ ತಂಡವನ್ನು ಮೇ 10ರೊಳಗೆ ವಾಪಸು ಕಳುಹಿಸಲಾಗುವುದು’ ಎಂದು ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಸೋಮವಾರ ತಿಳಿಸಿದ್ದರು.
ಕಳೆದ ವರ್ಷದ ಡಿಸೆಂಬರ್ನಲ್ಲಿ ದುಬೈನಲ್ಲಿ ನಡೆದಿದ್ದ ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಯಿಜು ನಡುವಿನ ಚರ್ಚೆಯ ವೇಳೆ ಉನ್ನತಾಧಿಕಾರ ಸಮಿತಿ ರಚಿಸಲು ತೀರ್ಮಾನಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.