ಮುಂಬೈ: ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ, ಚೆನ್ನೈನಿಂದ ಮುಂಬೈಗೆ ತೆರಳಿದ್ದ ಇಂಡಿಗೊ ವಿಮಾನವು ಇಲ್ಲಿ ಶನಿವಾರ ತುರ್ತು ಭೂಸ್ಪರ್ಶ ಮಾಡಿತು.
‘ಬೆಳಿಗ್ಗೆ 8.45ಕ್ಕೆ ವಿಮಾನವು ಮುಂಬೈ ವಿಮಾನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ನಂತರ, ವಿಮಾನದಲ್ಲಿದ್ದ ಎಲ್ಲ 172 ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಯಿತು’ ಎಂದು ಮೂಲಗಳು ಹೇಳಿವೆ.
‘ಚೆನ್ನೈನಿಂದ ಮುಂಬೈಗೆ ಹೊರಟಿದ್ದ ವಿಮಾನದಲ್ಲಿ (6ಇ5314) ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಕರೆ ಬರುತ್ತಿದ್ದಂತೆಯೇ, ಮುಂಬೈನಲ್ಲಿರುವ ಏರ್ ಟ್ರಾಫಿಕ್ ಕಂಟ್ರೋಲ್ಗೆ ಪೈಲಟ್ ಮಾಹಿತಿ ನೀಡಿದರು. ಬೆನ್ನಲ್ಲೇ, ತುರ್ತು ಘೋಷಿಸಲಾಯಿತು’ ಎಂದು ತಿಳಿಸಿವೆ.
‘ಪ್ರಯಾಣಿಕರನ್ನು ಇಳಿಸಿದ ನಂತರ, ಶಿಷ್ಟಾಚಾರದಂತೆ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಒಯ್ದು, ಸುರಕ್ಷತೆಗೆ ಸಂಬಂಧಿಸಿ ಪರಿಶೀಲನೆಗೆ ಒಳಪಡಿಸಲಾಯಿತು’ ಎಂದು ಇಂಡಿಗೊ ಸಂಸ್ಥೆ ತಿಳಿಸಿದೆ.
ಒಂದು ವಾರದ ಅವಧಿಯಲ್ಲಿ, ಇಂಡಿಗೊ ಸಂಸ್ಥೆಯ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಎರಡನೇ ಘಟನೆ ಇದಾಗಿದೆ. ಮೇ 28ರಂದು ವಾರಾಣಸಿಯಿಂದ ದೆಹಲಿಗೆ ಹೊರಟಿದ್ದ ಸಂಸ್ಥೆಯ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಕರೆಯು ಸಾಕಷ್ಟು ಆತಂಕ ಮೂಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.