ADVERTISEMENT

ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ಮೂಡಿಗೆರೆ ನಕ್ಸಲ್ ಸುರೇಶ್ ಕೇರಳ ಪೊಲೀಸರಿಗೆ ಶರಣು

‘ನಾನೊಬ್ಬ ಮಾವೋವಾದಿಯಾಗಿ ಏನು ಮಾಡಲು ಆಗಲಿಲ್ಲ’ ಎಂದು ಮಾಧ್ಯಮದವರೆದುರು ಅಳಲು

ಪಿಟಿಐ
Published 7 ಏಪ್ರಿಲ್ 2024, 13:49 IST
Last Updated 7 ಏಪ್ರಿಲ್ 2024, 13:49 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಕಣ್ಣೂರು, ಕೇರಳ: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಅಂಗಡಿ ಗ್ರಾಮದ ನಕ್ಸಲ್ ಸುರೇಶ್ ಅಲಿಯಾಸ್‌ ಪ್ರದೀಪ್‌ ಭಾನುವಾರ ಕೇರಳದ ಕಣ್ಣೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.

ಇತ್ತೀಚೆಗೆ ತಮ್ಮ ತಂಡದ ಸದಸ್ಯರ ಜೊತೆ ಕೇರಳ–ಕರ್ನಾಟಕ ಗಡಿ ಭಾಗದ ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಸುರೇಶ್ ಕಾಡಾನೆ ದಾಳಿಗೆ ತುತ್ತಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆರು ಜನರಿದ್ದ ನಕ್ಸಲ್ ತಂಡ ಗಡಿ ಭಾಗವಾದ ಕಂಜಿರಕೊಳ್ಳಿ ಚಿತ್ತಾರಿ ಕಾಲೋನಿಯಲ್ಲಿ ಬಿಟ್ಟು ಹೋಗಿತ್ತು. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಸುರೇಶ್ ಅವರನ್ನು ಕಣ್ಣೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು.

ADVERTISEMENT

ಚಿಕಿತ್ಸೆ ಪಡೆದುಕೊಂಡು ಸದ್ಯ ಸ್ವಲ್ಪ ಚೇತರಿಸಿಕೊಂಡಿರುವ ಸುರೇಶ್, ತಾನು ಪೊಲೀಸರಿಗೆ ಶರಣಾಗುತ್ತಿದ್ದೇನೆ ಎಂದು ಘೋಷಿಸಿದ್ದಾರೆ.

ಶರಣಾಗುವ ವೇಳೆ ಗಾಲಿ ಕುರ್ಚಿಯಲ್ಲಿ ಬಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾನು ಕಳೆದ 23 ವರ್ಷಗಳಿಂದ ನಕ್ಸಲ್ ಚಳವಳಿಯಲ್ಲಿದ್ದೆ. ಬಹಳ ಹಿಂದೆನೇ ಶರಣಾಗಬೇಕೆಂದುಕೊಂಡಿದ್ದೆ. ಆದರೆ, ಕಾಲ ಕೂಡಿ ಬಂದಿರಲಿಲ್ಲ. ನಾನೊಬ್ಬ ಮಾವೋವಾದಿಯಾಗಿ ಏನು ಮಾಡಲು ಆಗಲಿಲ್ಲ. ಅಲ್ಲದೇ ನಮ್ಮ ಸಂಗಾತಿಗಳಾರೂ ಕೇರಳ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಬದಲಾವಣೆ ತರಲು ಆಗಲಿಲ್ಲ ಎಂದು ಹೇಳಿದ್ದಾರೆ.

ಚಿಕ್ಕಮಗಳೂರು, ಉಡುಪಿ ಸೇರಿ ರಾಜ್ಯದ ಹಲವೆಡೆ ಸುರೇಶ್ ವಿರುದ್ಧ 35ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.