ADVERTISEMENT

ಬದ್ಲಾಪುರ ಪ್ರಕರಣ | ಆಡಳಿತ ಮಂಡಳಿಯಿಂದ ಪ್ರಕರಣ ಮುಚ್ಚಿ ಹಾಕುವ ಯತ್ನ: ಆರೋ‍ಪ

ಬದ್ಲಾಪುರ ಪ್ರಕರಣ: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆರೋಪ | ಸರ್ಕಾರ–ವಿರೋಧ ಪಕ್ಷಗಳ ಮಧ್ಯೆ ವಾಕ್ಸಮರ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2024, 23:30 IST
Last Updated 21 ಆಗಸ್ಟ್ 2024, 23:30 IST
<div class="paragraphs"><p>ಬದ್ಲಾಪುರ ಪ್ರಕರಣವನ್ನು ಖಂಡಿಸಿ ಶಿವಸೇನಾದ (ಉದ್ಧವ್‌ ಬಣ) ಕಾರ್ಯಕರ್ತರು ಮುಂಬೈನಲ್ಲಿ&nbsp;ಬುಧವಾರ ಪ್ರತಿಭಟನೆ ನಡೆಸಿದರು </p></div>

ಬದ್ಲಾಪುರ ಪ್ರಕರಣವನ್ನು ಖಂಡಿಸಿ ಶಿವಸೇನಾದ (ಉದ್ಧವ್‌ ಬಣ) ಕಾರ್ಯಕರ್ತರು ಮುಂಬೈನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು

   

–ಪಿಟಿಐ ಚಿತ್ರ

ಮುಂಬೈ: ನರ್ಸರಿಗೆ ಹೋಗುವ ಇಬ್ಬರು ಬಾಲಕಿಯರ ಮೇಲೆ ಶಾಲೆಯ ಸ್ವಚ್ಛತಾ ಕಾರ್ಮಿಕ ನಡೆಸಿದ ಲೈಂಗಿಕ ದೌರ್ಜನ್ಯ ಪ್ರಕರಣವು ಈಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಎಫ್‌ಐಆರ್‌ ದಾಖಲಿಸಿಕೊಳ್ಳುವಲ್ಲಿ ಪೊಲೀಸರು ವಿಳಂಬ ಮಾಡಿದ ಕುರಿತು ಭಾರಿ ಆಕ್ರೋಶ ವ್ಯಕ್ತವಾಗಿದೆ.

ADVERTISEMENT

ಈ ಬಗ್ಗೆ ಮಹಾರಾಷ್ಟ್ರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಸುಸೀಬೆನ್‌ ಶಾ ಪ್ರತಿಕ್ರಿಯಿಸಿದ್ದು, ‘ಪೊಲೀಸರು ದೂರು ಸ್ವೀಕರಿಸದೆ, ಪೋಷಕರನ್ನು 11 ಗಂಟೆಗಳವರೆಗೆ ಕಾಯುವಂತೆ ಮಾಡಿರುವುದು ತಪ್ಪು’ ಎಂದರು.

‘ಪೊಲೀಸರಿಗೆ ದೂರು ನೀಡುವಲ್ಲಿ ಸಂತ್ರಸ್ತ ಬಾಲಕಿಯರ ಪೋಷಕರಿಗೆ ಸಹಕರಿಸಬೇಕಿದ್ದ ಶಾಲೆಯು, ಪ್ರಕರಣವನ್ನು ಮುಚ್ಚಿ ಹಾಕುವುದರಲ್ಲಿ ತೊಡಗಿತ್ತು. ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಗೊತ್ತಿದ್ದರೂ ಶಾಲೆಯ ಮುಖ್ಯ ಶಿಕ್ಷಕ ಪೊಲೀಸರಿಗೆ ದೂರು ನೀಡದೆ, ಶಾಲೆಯ ಆಡಳಿತ ಮಂಡಳಿಗೆ ವಿಷಯ ತಲುಪಿಸಿದ್ದಾರೆ’ ಎಂದರು.

‘ನಮಗೆ ವಿಷಯ ತಿಳಿದ ತಕ್ಷಣವೇ ನಮ್ಮ ಆಯೋಗದ ಬದ್ಲಾಪುರ ಘಟಕದ ಸದಸ್ಯರು ಸಂತ್ರಸ್ತ ಬಾಲಕಿಯರ ಪೋಷಕರನ್ನು ಕರೆದುಕೊಂಡು ಪೊಲೀಸ್‌ ಠಾಣೆಗೆ ತೆರಳಿದ್ದರು. ಆದರೆ, ಪೊಲೀಸರು ಪೋಷಕರ ದೂರು ಸ್ವೀಕರಿಸಲಿಲ್ಲ’ ಎಂದರು.

‘ಮಹಾಯುತಿ’–‘ಮಹಾ ವಿಕಾಸ ಆಘಾಡಿ’ ಮಾತಿನ ಸಮರ: ಮಂಗಳವಾರ 10 ಗಂಟೆಗಳವರೆಗೆ ಸಾರ್ವಜನಿಕರು ಬದ್ಲಾಪುರ ರೈಲು ನಿಲ್ದಾಣದಲ್ಲಿ ರೈಲು ತಡೆ ನಡೆಸಿದ್ದರು. ಆದರೆ, ‘ಇವರೆಲ್ಲರೂ ರಾಜಕೀಯ ಪಕ್ಷಗಳ ಕಾರ್ಯಕರ್ತರು’ ಎಂದು ‘ಮಹಾಯುತಿ’ ಸರ್ಕಾರದ ಶಾಸಕರು, ಸಚಿವರು ಹಾಗೂ ಮುಖ್ಯಮಂತ್ರಿ ಏಕನಾಥ ಶಿಂದೆ ದೂರಿದ್ದಾರೆ.

ಪ್ರತಿಭಟನೆ ವೇಳೆ ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಈ ಬಗ್ಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ‘ಪೋಷಕರ ದೂರು ದಾಖಲಿಸಿಕೊಳ್ಳದೆ ಪೊಲೀಸರು ತಪ್ಪು ಮಾಡಿದ್ದಾರೆ. ಇದರ ವಿರುದ್ಧ ಪ್ರತಿಭಟಿಸಿದರೆ, ಜನರ ಮೇಲೆ ಲಾಠಿ ಬೀಸಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕರು ದೂರಿದ್ದಾರೆ. ಆದರೆ, ಲಾಠಿ ಪ್ರಹಾರ ಮಾಡಿದ ಪೊಲೀಸರ ಕ್ರಮವನ್ನು ಸರ್ಕಾರ ಸಮರ್ಥಿಸಿಕೊಂಡಿದೆ.

ಪೊಲೀಸರು ದೂರು ದಾಖಲಿಸಿಕೊಳ್ಳುವಲ್ಲಿ ವಿಳಂಬ ಮಾಡಿರುವುದು ಖಂಡನೀಯ ಮತ್ತು ನಾಚಿಕೆಗೇಡಿನ ವಿಚಾರ. ದೂರು ದಾಖಲಿಸಿಕೊಳ್ಳಲು ವಿಳಂಬ ಮಾಡಿದರೆ ಪ್ರಮುಖ ಸಾಕ್ಷ್ಯಗಳು ಕೈತಪ್ಪಿ ಹೋಗುವ ಅಪಾಯವಿರುತ್ತದೆ. ಇಂಥ ಸೂಕ್ಷ್ಮ ವಿಚಾರದ ಕುರಿತು ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಈ ಬಗ್ಗೆ ಖಂಡಿತವಾಗಿಯೂ ತನಿಖೆ ನಡೆಯಬೇಕು 
ಉಜ್ವಲ್‌ ನಿಕಮ್‌ ಪ್ರಕರಣ ಸಂಬಂಧ ಸರ್ಕಾರ ನೇಮಿಸಿರುವ ಪಬ್ಲಿಕ್‌ ಪ್ರಾಸಿಕ್ಯೂಟರ್‌
ಘಟನೆ ನಡೆದ ತಕ್ಷಣವೇ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದ್ದರೆ ಪ್ರತಿಭಟನೆಯೇ ಆಗುತ್ತಿರಲಿಲ್ಲ. ಮಹಿಳೆಯರ ಸುರಕ್ಷತೆಯ ಕುರಿತು ಸರ್ಕಾರ ಗಂಭೀರವಾಗಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಗೃಹ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಮುಂಬೈಗಿಂತ ಹೆಚ್ಚಾಗಿ ದೆಹಲಿಯಲ್ಲಿಯೇ ಸಮಯ ಕಳೆಯುತ್ತಾರೆ. ಘಟನೆ ಕುರಿತು ಅವರು ಸ್ಪಷ್ಟೀಕರಣ ನೀಡಬೇಕು ಮತ್ತು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು
ಸುಪ್ರಿಯಾ ಸುಳೆ ಎನ್‌ಸಿಪಿ (ಶರದ್‌ ಬಣ) ಸಂಸದೆ
ಪ್ರತಿಭಟನೆಯು ರಾಜಕೀಯ ಪ್ರೇರಿತವಾಗಿತ್ತು. ಅವರು ಯಾರೂ ಸ್ಥಳೀಯರಲ್ಲ. ಪ್ರತಿಭಟನಕಾರರ ಬೇಡಿಕೆಗಳಿಗೆ ಸರ್ಕಾರ ಸಮ್ಮತಿ ಸೂಚಿಸಿದ ಮೇಲೆಯೂ ಪ್ರತಿಭಟನೆಯನ್ನು ಮುಂದುವರಿಸಲಾಯಿತು. ಅಂದರೆ ಅವರು ಸಾರ್ವಜನಿಕರಾಗಿರಲಿಲ್ಲ ಎಂದರ್ಥ. ಕೆಲವರು ನಮ್ಮ ಸರ್ಕಾರದ ‘ಲಾಡ್ಲಿ ಬೆಹನಾ ಯೋಜನೆ’ ಹೆಸರು ಬರೆದಿದ್ದ ಭಿತ್ತಿಪತ್ರಗಳನ್ನು ಹಿಡಿದುಕೊಂಡಿದ್ದರು. ರೈಲು ತಡೆ ನಡೆಸಿ ಯಾರಾದರೂ ಪ್ರತಿಭಟನೆ ನಡೆಸುತ್ತಾರೆಯೇ? ನಮ್ಮ ಲಾಡ್ಲಿ ಬೆಹನಾ ಯೋಜನೆ ಕುರಿತು ವಿರೋಧ ಪಕ್ಷಗಳಿಗೆ ಇರುವ ಹೊಟ್ಟೆ ಕಿಚ್ಚು ಪ್ರತಿಭಟನೆಯಲ್ಲಿ ಕಾಣಿಸುತ್ತಿತ್ತು
ಏಕನಾಥ ಶಿಂದೆ ಮುಖ್ಯಮಂತ್ರಿ

* ಪ್ರಕರಣದ ಆರೋಪಿ ಸ್ವಚ್ಛತಾ ಕಾರ್ಮಿಕನನ್ನು ಸ್ಥಳೀಯ ನ್ಯಾಯಾಲಯವು ಆಗಸ್ಟ್‌ 26ರವರೆಗೆ ಪೊಲೀಸ್‌ ವಶಕ್ಕೆ ನೀಡಿದೆ.

* ಮಹಿಳೆಯರ ಸುರಕ್ಷತೆ ವಿಷಯದಲ್ಲಿ ‘ಮಹಾಯುತಿ’ ಸರ್ಕಾರ ಸೋತಿದೆ ಎಂದು ಆರೋಪಿಸಿ ಮಹಾ ವಿಕಾಸ ಆಘಾಡಿಯು ಆಗಸ್ಟ್‌ 24ರಂದು ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿದೆ.

* ಕಲ್ಲು ತೂರಾಟದಲ್ಲಿ 17 ಪೊಲೀಸರು ಹಾಗೂ 8 ಮಂದಿ ರೈಲ್ವೆ ಪೊಲೀಸರು ಗಾಯಗೊಂಡಿದ್ದಾರೆ.

* ಬದ್ಲಾಪುರದಾದ್ಯಂತ ನಡೆದ ‍ಪ್ರತಿಭಟನೆಯ ವೇಳೆ ನಡೆದ ಗಲಾಟೆ ಸಂಬಂಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದು 72 ಜನರನ್ನು ಬಂಧಿಸಿದ್ದಾರೆ.

* ಬದ್ಲಾಪುರದ ಎಲ್ಲ ಶಾಲೆಗಳು ಬುಧವಾರ ಬಂದ್‌ ಆಗಿದ್ದವು ಹಾಗೂ ನಗರದಾದ್ಯಂತ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.