ಅಯೋಧ್ಯೆ: ಐನೂರು ವರ್ಷಗಳ ಕಾಯುವಿಕೆಯ ನಂತರ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಅಯೋಧ್ಯೆಯಲ್ಲಿ ನಡೆದಿದೆ, ಇಡೀ ದೇಶವು ರಾಮಮಯ ಆಗಿದೆ, ತ್ರೇತಾಯುಗಕ್ಕೆ ಮತ್ತೆ ಕಾಲಿಟ್ಟಂತೆ ಅನಿಸುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೋಮವಾರ ಹೇಳಿದರು.
ಬಾಲರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಆದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇದು ನಮ್ಮೆಲ್ಲರಿಗೂ ಭಾವನಾತ್ಮಕ ಸಂದರ್ಭ’ ಎಂದರು.
ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿರುವುದರಿಂದ ರಾಮ ರಾಜ್ಯದ ಘೋಷಣೆ ಆದಂತಾಗಿದೆ ಎಂದು ಅವರು ಹೇಳಿದರು. ಇನ್ನು ಮುಂದೆ ಅಯೋಧ್ಯೆಯ ಬೀದಿಗಳಲ್ಲಿ ಗುಂಡಿನ ಸದ್ದು ಕೇಳುವುದಿಲ್ಲ, ಕರ್ಫ್ಯೂ ಹೇರುವ ಸಂದರ್ಭ ಇರುವುದಿಲ್ಲ ಎಂದು ಅವರು ಹೇಳಿದರು.
ರಾಮ ಮಂದಿರವನ್ನು ಅವರು ರಾಷ್ಟ್ರ ಮಂದಿರ ಎಂದು ಕರೆದರು. ಬಾಲರಾಮನ ವಿಗ್ರಹಕ್ಕೆ ಪ್ರಾಣಪ್ರತಿಷ್ಠಾಪನೆ ನಡೆದಿರುವುದು ಐತಿಹಾಸಿಕ ಸಂದರ್ಭ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದರು.
ದೇಶದ ಬಹುಸಂಖ್ಯಾತ ಸಮುದಾಯದ ಜನ ತಮ್ಮದೇ ದೇಶದಲ್ಲಿ, ತಮ್ಮ ದೇವರ ಜನ್ಮಸ್ಥಳದಲ್ಲಿ ಮಂದಿರ ನಿರ್ಮಿಸಲು ಸರಿಸುಮಾರು 500 ವರ್ಷ ಕಾಯ್ದ ನಿದರ್ಶನ ವಿಶ್ವದಲ್ಲಿ ಇದೊಂದೇ ಇರಬೇಕು ಎಂದು ಯೋಗಿ ಆದಿತ್ಯನಾಥ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.