ಹೈದರಾಬಾದ್: ಸಮಾಜದ ಎಲ್ಲಾ ವರ್ಗಗಳ ಪರವಾಗಿ ಕೆಲಸ ಮಾಡುವ ಕಾಂಗ್ರೆಸ್ ಸರ್ಕಾರ ತೆಲಂಗಾಣದಲ್ಲಿ ಅಧಿಕಾರಕ್ಕೆ ಬರಬೇಕು ಎಂಬುದು ತಮ್ಮ ಕನಸು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದರು.
ಇಲ್ಲಿಗೆ ಸಮೀಪದ ತುಕ್ಕುಗೂಡದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ’ನಾವು ಆರು ಗ್ಯಾರಂಟಿಗಳನ್ನು ನೀಡುತ್ತಿದ್ದು ಪ್ರತಿಯೊಂದನ್ನೂ ಈಡೇರಿಸಲಿದ್ದೇವೆ. ಕಾಂಗ್ರೆಸ್ ಪಕ್ಷವನ್ನು ಜನರು ಬೆಂಬಲಿಸಬೇಕು’ ಎಂದರು.
‘ಮಹಾಲಕ್ಷ್ಮಿ ಯೋಜನೆಯಡಿ ತೆಲಂಗಾಣದಲ್ಲಿನ ಮಹಿಳೆಯರಿಗೆ ತಿಂಗಳಿಗೆ ₹ 2500 ಆರ್ಥಿಕ ನೆರವು, ₹ 500 ದರದಲ್ಲಿ ಅಡುಗೆ ಅನಿಲ ಒದಗಿಸಲಾಗುವುದು. ರಾಜ್ಯದಾದ್ಯಂತ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗುವುದು‘ ಎಂದು ಪಕ್ಷದ ಗ್ಯಾರಂಟಿಗಳ ಕುರಿತು ವಿವರಿಸಿದರು.
‘ತೆಲಂಗಾಣ ರಾಜ್ಯದ ಉದಯದ ಸಂದರ್ಭದಲ್ಲಿ ನಾನು ಮತ್ತು ಪಕ್ಷದ ಇತರ ನಾಯಕರು ಭಾಗಿಯಾಗಿದ್ದೆವು. ರಾಜ್ಯವನ್ನು ಈಗ ಹೊಸ ಎತ್ತರಕ್ಕೆ ಒಯ್ಯುವುದು ನಮ್ಮ ಕರ್ತವ್ಯ‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.