ಛತ್ರಪತಿ ಸಂಭಾಜಿನಗರ: ಮರಾಠ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿ ಸರ್ಕಾರ ತನ್ನ ನಿಲುವನ್ನು ಬದಲಾಯಿಸಿದ್ದು, ನಮ್ಮ ಮುಂದಿನ ಹೋರಾಟದ ರೂಪುರೇಷೆ ರೂಪಿಸಲು ಸಮುದಾಯವು ಡಿಸೆಂಬರ್ 17ರಂದು ಸಭೆ ನಡೆಸಲಿದೆ ಎಂದು ಹೋರಾಟಗಾರ ಮನೋಜ್ ಜರಾಂಗೆ ತಿಳಿಸಿದರು.
ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜರಾಂಗೆ, ‘ಮರಾಠರಿಗೆ ಮೀಸಲಾತಿ ಕಲ್ಪಿಸಲು ಸರ್ಕಾರಕ್ಕೆ ಡಿಸೆಂಬರ್ 24ರವರಗೆ ಗಡುವು ನೀಡಿದ್ದು, ಆ ಬಳಿಕವೇ ಸಭೆ ನಡೆಸಬೇಕೆಂದು ನಾವು ತೀರ್ಮಾನಿಸಿದ್ದೇವು. ಆದರೆ, ಕೆಲವು ಬೆಳವಣಿಗೆಗಳಿಂದಾಗಿ, ಡಿಸೆಂಬರ್ 17ರಂದೇ ಸಭೆ ನಡೆಸಲು ತೀರ್ಮಾನಿಸಿದ್ದೇವೆ’ ಎಂದು ಹೇಳಿದರು.
‘ಅಂತರ್ವಲಿ ಸರತಿ ಗ್ರಾಮದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ, ಬಂಧಿತರ ಮೇಲಿನ ಪ್ರಕರಣಗಳನ್ನು ಕೈಬಿಡುವುದಾಗಿ ಸರ್ಕಾರ ತಿಳಿಸಿತ್ತು. ಆದರೆ, ಸಚಿವ ಛಗನ್ ಭುಜಬಲ್ ಅವರ ಹೇಳಿಕೆಯ ಬಳಿಕ ಸರ್ಕಾರ ತನ್ನ ನಿಲುವನ್ನು ಬದಲಾಯಿಸಿದೆ’ ಎಂದು ತಿಳಿಸಿದರು.
‘ಸರ್ಕಾರ ಈವರೆಗೆ ಮರಾಠ ಮೀಸಲಾತಿಯ ಬಗ್ಗೆ ಯಾವುದೇ ಲಿಖಿತ ಹೇಳಿಕೆಯನ್ನು ನೀಡಿಲ್ಲ. ಹಿಂಸಾಚಾರದ ಬಗ್ಗೆ ಮಾತನಾಡಿದ್ದು ಭುಜಬಲ ಅವರು, ಆದರೆ, ನಮ್ಮ ಮೇಲೆ ಕ್ರಮಕೈಗೊಳ್ಳಲಾಗಿದೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.