ರಾಂಚಿ: ಭೂ ಹಗರಣದ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ವಿಚಾರಣೆಯನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶನಿವಾರ ನಡೆಸಿದರು.
ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಸೊರೇನ್ (48) ಈ ಹಿಂದೆ ಇ.ಡಿ ಏಳು ಸಮನ್ಸ್ಗಳನ್ನು ನೀಡಿದ್ದರೂ, ವಿಚಾರಣೆಗೆ ಗೈರಾಗಿದ್ದರು. ಎಂಟನೇ ಬಾರಿಗೆ ಸಮನ್ಸ್ ನೀಡಿದ ನಂತರ ತಮ್ಮ ಅಧಿಕೃತ ನಿವಾಸದಲ್ಲೇ ವಿಚಾರಣೆಗೆ ಹಾಜರಾಗಲು ಸಮ್ಮತಿಸಿದ್ದರು.
ಇ.ಡಿ ಅಧಿಕಾರಿಗಳು ಮುಖ್ಯಮಂತ್ರಿಯ ಅಧಿಕೃತ ನಿವಾಸಕ್ಕೆ ಶನಿವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ತೆರಳಿ ವಿಚಾರಣೆ ಆರಂಭಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಐಎಸ್ಎಫ್ ಇ.ಡಿ ಅಧಿಕಾರಿಗಳಿಗೆ ಭದ್ರತೆ ಒದಗಿಸಿದ್ದು, ಸೊರೇನ್ ನಿವಾಸದ ಸುತ್ತಮುತ್ತಲಿನ ಚಟುವಟಿಕೆಗಳ ಮೇಲೆ ನಿಗಾ ಇಡಲು ಅತ್ಯಾಧುನಿಕ ಬಾಡಿ ಕ್ಯಾಮೆರಾಗಳನ್ನು ಬಳಸುತ್ತಿದೆ. ಸಿಆರ್ಪಿಎಫ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಬುಡಕಟ್ಟು ಸಂಘಟನೆಗಳ ಪ್ರತಿಭಟನೆ
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ತನಿಖಾ ಸಂಸ್ಥೆಗಳ ಮೂಲಕ ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿ ಆಡಳಿತಾರೂಢ ಜೆಎಂಎಂ ಹಾಗೂ ವಿವಿಧ ಬುಡಕಟ್ಟು ಸಂಘಟನೆಗಳು ಶನಿವಾರ ಜಾರ್ಖಡ್ನಾದ್ಯಂತ ಪ್ರತಿಭಟಿಸಿದವು. ಬಿಲ್ಲು–ಬಾಣಗಳೊಂದಿಗೆ ಬುಡಕಟ್ಟು ಜನರು ಹಾಗೂ ಜೆಎಂಎಂ ಕಾರ್ಯಕರ್ತರು ಸೊರೇನ್ ಅವರ ವಿಚಾರಣೆ ನಡೆಯುತ್ತಿದ್ದ ಅಧಿಕೃತ ನಿವಾಸದಿಂದ ಅನತಿ ದೂರದಲ್ಲಿ ಪ್ರತಿಭಟನೆ ನಡೆಸಿದರು. ಬುಡಕಟ್ಟು ಮುಖ್ಯಮಂತ್ರಿಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ದೂರಿರುವ ಆದಿವಾಸಿ ಸಂಘಟನೆಯು ಗಿರಿದಿಹ್–ದುಮ್ರಿ ರಸ್ತೆ ತಡೆ ನಡೆಸಿದೆ. ‘ಜೆಎಂಎಂ ಪ್ರತಿಭಟನೆಗೆ ಕರೆ ನೀಡಿಲ್ಲ. ಅದು ಸ್ವಯಂಪ್ರೇರಿತ’ ಎಂದು ಬುಡಕಟ್ಟು ಜನಾಂಗದವರ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಭಟ್ಟಾಚಾರ್ಯ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.