ಜಾರ್ಖಂಡ್: ಬಿಜೆಪಿಯ ಪಿತೂರಿಯ ಭಾಗವಾಗಿ ಜಾರ್ಖಂಡ್ನಲ್ಲಿ ವಿಧಾನಸಭೆ ಚುನಾವಣೆಯನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ನಡೆಸಲಾಗುತ್ತಿದೆ ಎಂದು ಶಾಸಕಿ, ಮುಖ್ಯಮಂತ್ರಿ ಹೇಮಂತ್ ಸೊರೇನ್ ಪತ್ನಿ ಕಲ್ಪನಾ ಸೊರೇನ್ ಆರೋಪಿಸಿದರು.
ಗಿರಿಧಿಹದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಚುನಾವಣಾ ಸಂಸ್ಥೆಗಳ ಮೇಲೆ ಬಿಜೆಪಿಯು ತನ್ನ ಪ್ರಭಾವವನ್ನು ಬಲಪಡಿಸುತ್ತಿದೆ ಎಂದು ದೂರಿದರು.
‘ಮಹಾರಾಷ್ಟ್ರದಲ್ಲಿ ನಿಗದಿತ ಸಮಯಕ್ಕೆ ಚುನಾವಣೆ ಘೋಷಣೆಯಾದರೆ, ಜಾರ್ಖಂಡ್ನಲ್ಲಿ ಅವಧಿಗೂ ಮುನ್ನವೇ ಘೋಷಣೆಯಾಗಿದೆ. ಸಾಮಾನ್ಯವಾಗಿ ಐದು ಹಂತಗಳಲ್ಲಿ ನಡೆಯುತ್ತಿದ್ದ ಚುನಾವಣೆಯನ್ನು ಈ ಬಾರಿ ಎರಡು ಹಂತದಲ್ಲಿ ನಡೆಸಲಾಗುತ್ತಿದೆ’ ಎಂದು ಹೇಳಿದರು.
‘ಗ್ರಾಮೀಣ ಪ್ರದೇಶದಲ್ಲಿ ಮತದಾನದ ವೇಳೆಯನ್ನು ಒಂದು ಗಂಟೆ ಕಡಿತಗೊಳಿಸಲಾಗಿದೆ. ಗ್ರಾಮೀಣ ಭಾಗದ ಅನೇಕ ಮತದಾರರು ಮತಗಟ್ಟೆಗಳನ್ನು ತಲುಪಲು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇದು ಹೇಮಂತ್ ಸೊರೇನ್ ಪರ ಗಟ್ಟಿಯಾಗಿ ನಿಂತಿರುವ ಬಡವರು, ರೈತರು , ಕಾರ್ಮಿಕರು ಮತ್ತು ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ’ ಎಂದರು.
ಜಾರ್ಖಂಡ್ ವಿಧಾನಸಭೆಗೆ ನವೆಂಬರ್ 13 ಮತ್ತು 20ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 23ಕ್ಕೆ ಮತ ಎಣಿಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.