ಗರ್ವಾ: ಜಾರ್ಖಂಡ್ನ ಗರ್ವಾ ಜಿಲ್ಲೆಯಲ್ಲಿ ಹಸು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ 60 ವರ್ಷದ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಬೈಕಿಗೆ ಕಟ್ಟಿಕೊಂಡು ಮೂವರು ಎಳೆದೊಯ್ದು ಹಿಂಸಿಸಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಅಮ್ರೋರಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ಸುರ್ಸ್ವಾತಿ ರಾಮ್ ಎಂಬಾತ ಶುಕ್ರವಾರ ಮಧ್ಯಾಹ್ನ ತನ್ನ ಜಾನುವಾರುಗಳೊಂದಿಗೆ ಬನ್ಶಿಧರ್ ನಗರ್ ಉಂಟಾರಿಗೆ ತೆರಳುತ್ತಿದ್ದರು. ಬೈಕ್ನಲ್ಲಿದ್ದ ರಾಹುಲ್ ದುಬೆ, ರಾಜೇಶ್ ದುಬೆ ಮತ್ತು ಕಾಶಿನಾಥ್ ಭುಯಾನ್ ಎಂಬುವರು ರಾಮ್ನನ್ನು ಅಡ್ಡಗಟ್ಟಿ, ಹಸು ಕಳ್ಳಸಾಗಣೆ ಆರೋಪ ಹೊರಿಸಿ, ಬಟ್ಟೆ ಬಿಚ್ಚಿಸಿದ್ದಾರೆ. ನಂತರ ಅವರನ್ನು ಬೈಕಿಗೆ ಕಟ್ಟಿಕೊಂಡು ಸ್ವಲ್ಪದೂರ ಎಳೆದೊಯ್ದು, ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದರು. ಗಾಯಾಳು ರಾಮ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂವರು ಆರೋಪಿಗಳ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳಲ್ಲಿ ಕಾಶಿನಾಥ್ ಭುಯಾನ್ನನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಶೋಧ ಮುಂದುವರಿದಿದೆ ಎಂದು ಬನ್ಶಿಧರ್ ನಗರ ಉಂಟಾರಿ ಉಪವಿಭಾಗೀಯ ಪೊಲೀಸ್ ಅಧಿಕಾರಿ ಸತ್ಯೇಂದ್ರ ನಾರಾಯಣ್ ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.