ನವದೆಹಲಿ: ‘ಕಜಾನ ಖಂಡಿತವಾಗಿಯೂ ಕೈಬೀಸಿ ಕರೆಯುತ್ತಿದೆ. ಆದರೆ, ದುಃಖಕರವೆಂದರೆ ಮಣಿಪುರ ಇನ್ನೂ ಕಾಯುತ್ತಲೇ ಇದೆ’ ಎಂದು ಕಾಂಗ್ರೆಸ್, ರಷ್ಯಾದಲ್ಲಿ ನಡೆಯುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸೋಮವಾರ ವ್ಯಂಗ್ಯವಾಡಿದೆ.
ರಷ್ಯಾದ ಕಜಾನ ನಗರದಲ್ಲಿ ಈ ವಾರ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಆಹ್ವಾನ ನೀಡಿರುವುದರಿಂದ ಪ್ರಧಾನಿ ಮೋದಿ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಎರಡು ದಿನಗಳ ಭೇಟಿಗೆ ಮಂಗಳವಾರ ಕಜಾನ್ಗೆ ಪ್ರಯಾಣಿಸಲಿದ್ದಾರೆ.
ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿಯವರನ್ನು ಕಾಂಗ್ರೆಸ್ ಪದೇ ಪದೇ ಒತ್ತಾಯಿಸಿದೆ. ಮಣಿಪುರದಲ್ಲಿ ಶಾಂತಿ ಮತ್ತು ಸಹಜ ಪರಿಸ್ಥಿತಿ ಪುನಃಸ್ಥಾಪಿಸಲು ಪ್ರಧಾನಿಯ ಭೇಟಿ ನೆರವಾಗಲಿದೆ ಎಂದು ಕಾಂಗ್ರೆಸ್ ಒತ್ತಿಹೇಳಿದೆ.
ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್, ಬಿಕ್ಸ್ ಶೃಂಗಸಭೆ ರಷ್ಯಾದ ಕಜಾನ ನಗರದಲ್ಲಿ ಮಂಗಳವಾರ ಆರಂಭವಾಗಲಿದೆ. ಈ ಬ್ರಿಕ್ಸ್ ಶೃಂಗಸಭೆಯ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಳ್ಳಲು ಮೋದಿ ಹೊರಟಿದ್ದಾರೆ. ಆದರೆ, ಬ್ರಿಕ್ಸ್ ಶೃಂಗಸಭೆ 2014ರ ಹಿಂದೆಯೂ ನಡೆದಿರುವ ಘನ ಇತಿಹಾಸವಿದೆ’ ಎಂದು ಕುಟುಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.