ಡೆಹ್ರಾಡೂನ್: ಕೇದಾರನಾಥ ದೇವಾಲಯಕ್ಕೆ ತೆರಳುವ ರಸ್ತೆಗಳನ್ನು ಅಭಿವೃದ್ಧಿ ನೆಪದಲ್ಲಿ ಅಗೆದು ಬಿಟ್ಟಿರುವುದನ್ನು ಖಂಡಿಸಿ ವ್ಯಾಪಾರಿಗಳು ಹಾಗೂ ದೇವಸ್ಥಾನದ ಅರ್ಚಕರು ಬುಧವಾರ ಹಿರಿಯ ಐಎಎಸ್ ಅಧಿಕಾರಿ ಅರವಿಂದ್ ಪಾಂಡೆಗೆ ಪೂಜೆ ಸಲ್ಲಿಸಲು ಅಡ್ಡಿಪಡಿಸಿ ಘೇರಾವ್ ಹಾಕಿದರು.
ರಾಜ್ಯ ಮಾಹಿತಿ ಆಯೋಗದ ಕಾರ್ಯದರ್ಶಿಯಾಗಿರುವ ಪಾಂಡೆ ಅವರನ್ನು ಕೆಲವು ಗಂಟೆಗಳ ತಡೆಹಿಡಿದರು. ತಕ್ಷಣ ಮಧ್ಯಪ್ರವೇಶಿಸಿದ ಉಖಿಮಠದ ಉಪ ವಿಭಾಗಾಧಿಕಾರಿ ಅನಿಲ್ ಶುಕ್ಲಾ, ಅರ್ಚಕರು, ವ್ಯಾಪಾರಿಗಳ ಸಮಸ್ಯೆ ಕುರಿತಂತೆ ಗಮನಹರಿಸುವ ಭರವಸೆ ನೀಡಿದ್ದಾರೆ’ ಎಂದು ಕೇದಾರನಾಥ ಅರ್ಚಕರ ಸಂಘ– ಕೇದಾರ್ ಸಭಾದ ಅಧ್ಯಕ್ಷ ರಾಜ್ಕುಮಾರ್ ತಿವಾರಿ ತಿಳಿಸಿದ್ದಾರೆ.
‘ಕೇದಾರ್ಪುರಿಯಲ್ಲಿ ನಡೆಯುತ್ತಿರುವ ಪುನರ್ ಅಭಿವೃದ್ಧಿ ಕೆಲಸದ ಕುರಿತು ಪಾಂಡೆ ಅವರು ಪರಿಶೀಲನೆ ನಡೆಸುತ್ತಿದ್ದ ವೇಳೆ ಅವರು ನನ್ನನ್ನೂ ತಡೆದರು’ ಎಂದರು.
‘ಅರವಿಂದ್ ಪಾಂಡೆ ಈ ಹಿಂದೆ ರಾಜ್ಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ವ್ಯಾಪಾರಿಗಳು, ಅರ್ಚಕರಿಗೆ ನೀಡಿದ್ದ ಮಾತು ಉಳಿಸಿಕೊಂಡಿಲ್ಲ. ನಮ್ಮ ಬೇಡಿಕೆಗಳು ಈಗಲೂ ಪೂರ್ತಿಯಾಗಿ ಈಡೇರಿಲ್ಲ. 8 ತಾಸು ಬಳಿಕ ಘೇರಾವ್ ಹಿಂದಕ್ಕೆ ಪಡೆಯಲಾಯಿತು‘ ಎಂದರು.
‘ಅರ್ಚಕರು, ವ್ಯಾಪಾರಿಗಳು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು’ ಎಂದು ಅನಿಲ್ ಶುಕ್ಲಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.