ADVERTISEMENT

ಇ.ಡಿ. ವಿಚಾರಣೆಗೆ ಕೇಜ್ರಿವಾಲ್ ಗೈರು

ಸಮನ್ಸ್ ಹಿಂಪಡೆಯುವಂತೆ ಕೋರಿದ ದೆಹಲಿ ಮುಖ್ಯಮಂತ್ರಿ

ಪಿಟಿಐ
Published 2 ನವೆಂಬರ್ 2023, 15:52 IST
Last Updated 2 ನವೆಂಬರ್ 2023, 15:52 IST
   

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಗೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಎದುರು ಗುರುವಾರ ಹಾಜರಾಗಲಿಲ್ಲ. ಬಿಜೆಪಿಯ ಚಿತಾವಣೆಯಿಂದ, ಬಾಹ್ಯ ಕಾರಣಗಳಿಂದಾಗಿ ಇ.ಡಿ. ಈ ಸಮನ್ಸ್‌ ಕಳುಹಿಸಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ಇ.ಡಿ.ಗೆ ಗುರುವಾರ ಪತ್ರ ಬರೆದಿರುವ ಕೇಜ್ರಿವಾಲ್, ವಿಚಾರಣೆಗೆ ಬರುವಂತೆ ಜಾರಿಗೊಳಿಸಿರುವ ‘ಸಮನ್ಸ್‌ಅನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ. ಈ ಸಮನ್ಸ್‌ ‘ಅಸ್ಪಷ್ಟವಾಗಿದೆ, ಕಾನೂನಿನ ಅಡಿಯಲ್ಲಿ ಇದಕ್ಕೆ ಸಮರ್ಥನೆಯಿಲ್ಲ’ ಎಂದು ಹೇಳಿದ್ದಾರೆ.

ಸಮನ್ಸ್‌ಗೆ ಕೇಜ್ರಿವಾಲ್ ನೀಡಿರುವ ಉತ್ತರವನ್ನು ಇ.ಡಿ ಪರಿಶೀಲಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಜ್ರಿವಾಲ್‌ ಅವರಿಗೆ ಇನ್ನೊಂದು ದಿನ ವಿಚಾರಣೆಗೆ ಬರುವಂತೆ ಸೂಚಿಸಬಹುದು ಎಂದು ಮೂಲಗಳು ಹೇಳಿವೆ. ಹಣದ ಅಕ್ರಮ ವರ್ಗಾವಣೆ ಕಾಯ್ದೆಯ ಅಡಿಯಲ್ಲಿ (ಪಿಎಂಎಲ್‌ಎ) ಕೇಜ್ರಿವಾಲ್‌ ಅವರ ಹೇಳಿಕೆಯನ್ನು ಇ.ಡಿ. ಅಧಿಕಾರಿಗಳು ದಾಖಲು ಮಾಡಿಕೊಳ್ಳುವವರಿದ್ದರು.

ADVERTISEMENT

ಎಎಪಿ ಪ್ರಮುಖರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರು ಈ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಈ ಸಮನ್ಸ್‌ ರಾಜಕೀಯ ಪ್ರೇರಿತವಾಗಿದೆ, ವಿಧಾನಸಭಾ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ತಮಗೆ ಅಡ್ಡಿಯುಂಟು ಮಾಡುವ ಉದ್ದೇಶ ಹೊಂದಿದೆ ಎಂದು ಕೇಜ್ರಿವಾಲ್ ಅವರು ಉತ್ತರಿಸಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಇ.ಡಿ. ಸಮನ್ಸ್ ಜಾರಿಮಾಡಿದ್ದರೂ, ಕೇಜ್ರಿವಾಲ್ ಅವರು ಗುರುವಾರ ಮಧ್ಯಪ್ರದೇಶದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಸಿಂಗ್ರೌಲಿ ನಗರದಲ್ಲಿ ರೋಡ್‌ಶೋನಲ್ಲಿ ಭಾಗಿಯಾಗಿದ್ದರು.

ಸಚಿವರ ಸ್ಥಳದಲ್ಲಿ ಇ.ಡಿ. ದಾಳಿ: ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಚಿವ, ಎಎಪಿ ನಾಯಕ ರಾಜ್‌ ಕುಮಾರ್ ಆನಂದ್ ಮತ್ತು ಇತರ ಕೆಲವರಿಗೆ ಸೇರಿದ ಪ್ರದೇಶಗಳ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಒಂದು ಡಜನ್ ಪ್ರದೇಶಗಳಲ್ಲಿ ಬೆಳಿಗ್ಗೆ 7.30ರಿಂದಲೇ ಶೋಧ ನಡೆದಿದೆ ಎಂದು ಗೊತ್ತಾಗಿದೆ. ಅಂತರರಾಷ್ಟ್ರೀಯ ಹವಾಲಾ ವಹಿವಾಟು ಮಾತ್ರವಲ್ಲದೆ ಕಸ್ಟಮ್ಸ್ ಸುಂಕ ವಂಚಿಸಲು ಆಮದು ವಸ್ತುಗಳ ತಪ್ಪು ಘೋಷಣೆಯ ಆರೋಪದ ಅಡಿಯಲ್ಲಿ ರೆವಿನ್ಯು ಗುಪ್ತದಳ ನಿರ್ದೇಶನಾಲಯ (ಡಿಆರ್‌ಐ) ದಾಖಲಿಸಿದ ದೋಷಾರೋಪವು ಈ ದಾಳಿಗೆ ಮೂಲ.

ಬಿಜೆಪಿ ಧರಣಿ: ಕೇಜ್ರಿವಾಲ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ರಾಜಘಾಟ್‌ನಲ್ಲಿ ಧರಣಿ ನಡೆಸಿದ್ದಾರೆ. ‘ದೆಹಲಿ ಅಬಕಾರಿ ನೀತಿ ಕುರಿತ ಹಗರಣದ ಪ್ರಮುಖ ಸೂತ್ರಧಾರ ಕೇಜ್ರಿವಾಲ್ ಎಂಬುದು ದೆಹಲಿಯ ಮಕ್ಕಳಿಗೂ ಗೊತ್ತಿದೆ’ ಎಂದು ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ವಾಗ್ದಾಳಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.