ತಿರುವನಂತಪುರ: ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಅಧಿಕೃತವಾಗಿ ಬದಲಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
2ನೇ ಬಾರಿಗೆ ಕೇರಳ ವಿಧಾನಸಭೆಯು ಈ ನಿರ್ಣಯ ಅಂಗೀಕರಿಸಿದೆ. ಮೊದಲ ನಿರ್ಣಯವನ್ನು ಪರಿಶೀಲಿಸಿದ್ದ ಕೇಂದ್ರದ ಗೃಹ ಸಚಿವಾಲಯವು ಕೆಲವು ತಾಂತ್ರಿಕ ಬದಲಾವಣೆಗಳಿಗೆ ಸೂಚಿಸಿತ್ತು.
ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾವಣೆಗೆ ಒತ್ತಾಯಿಸುವ ನಿರ್ಣಯ ಮಂಡಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳಲ್ಲೂ ಹೆಸರು ಬದಲಾವಣೆಗೆ ಒತ್ತಾಯಿಸಿದರು.
ಮಲಯಾಳಂನಲ್ಲಿ ನಮ್ಮ ರಾಜ್ಯವನ್ನು ‘ಕೇರಳಂ’ ಎಂದು ಕರೆಯಲಾಗುತ್ತದೆ. ಮಲಯಾಳಂ ಮಾತನಾಡುವ ಜನರಿಗಾಗಿ ಏಕೀಕೃತ ಕೇರಳ ನಿರ್ಮಾಣದ ಕೂಗು ದೇಶದ ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಬಲವಾಗಿ ಹೊರಹೊಮ್ಮಿದೆ ಎಂದಿದ್ದಾರೆ.
ಆದರೆ, ಸಂವಿಧಾನದ ಮೊದಲ ಪರಿಚ್ಛೇದದಲ್ಲೇ ನಮ್ಮ ರಾಜ್ಯದ ಹೆಸರನ್ನು ಕೇರಳ ಎಂದು ಬರೆಯಲಾಗಿದೆ. ಆರ್ಟಿಕಲ್ 3ರ ಅಡಿ ಕೇರಳದ ಹೆಸರನ್ನು ‘ಕೇರಳಂ’ಎಂದು ಬದಲಾವಣೆಗೆ ಕೂಡಲೇ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರವನ್ನು ಈ ವಿಧಾನಸಭೆ ಒತ್ತಾಯಿಸುತ್ತದೆ ಎಂದು ವಿಜಯನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.