ತಿರುವನಂತಪುರ: ಕೇರಳದಲ್ಲಿ ಪ್ರಥಮ ಪಿಯು(10+1) ಪ್ರವೇಶಾತಿಗೆ ಸೀಟು ಕೊರತೆ ಉಂಟಾಗಿದ್ದು, ಸೋಮವಾರ ಹಲವು ವಿದ್ಯಾರ್ಥಿ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ.
ಸೀಟು ಕೊರತೆ ಸಂಬಂಧ ಕೇರಳ ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದ ಬೆನ್ನಲ್ಲೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಾಂಗ್ರೆಸ್ನ ವಿದ್ಯಾರ್ಥಿ ಘಟಕವಾದ ‘ಕೇರಳ ವಿದ್ಯಾರ್ಥಿ ಸಂಘಟನೆ’(ಕೆಎಸ್ಯು) ಹಾಗೂ ಕಾಂಗ್ರೆಸ್ ಮಿತ್ರ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ವಿದ್ಯಾರ್ಥಿ ಘಟಕ ‘ಮುಸ್ಲಿಂ ವಿದ್ಯಾರ್ಥಿಗಳ ಒಕ್ಕೂಟಗಳು’(ಎಮ್ಎಸ್ಎಫ್) ಪ್ರತಿಭಟನೆಯ ಮುಂದಾಳತ್ವ ವಹಿಸಿಕೊಂಡಿವೆ.
ಪ್ರತಿಭಟನೆಯ ಭಾಗವಾಗಿ ಕೆಎಸ್ಯು ಹಾಗೂ ಎಮ್ಎಸ್ಎಫ್ ಕಾರ್ಯಕರ್ತರು ಕೇರಳ ವಿಧಾನಸಭೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು, ಪೊಲೀಸರು ತಡೆದಿದ್ದಾರೆ. ಕೊಲ್ಲಂನಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವ ವೇಳೆ ಉದ್ರಿಕ್ತರು ಪೊಲೀಸರತ್ತ ಕಲ್ಲು ತೂರಿರುವುದಾಗಿ ವರದಿಯಾಗಿದೆ. ಕೋಯಿಕ್ಕೋಡ್, ವಯನಾಡ್ ಹಾಗೂ ಮಲಪ್ಪುರಂ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆದಿದೆ.
ಪ್ರಥಮ ಪಿಯುಗೆ ದಾಖಲಾಗಲು ಸೀಟು ಸಿಗುವುದೋ ಇಲ್ಲವೋ ಎಂಬ ಆತಂಕದಿಂದ ಜೂ.11ರಂದು ಮಲಪ್ಪುರಂ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಆರೋಪ ಕೇಳಿಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.