ತಿರುವನಂತಪುರ: ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ‘ಕಾಂಗ್ರೆಸ್ ನಾಯಕ ತನ್ನ ವ್ಯಕ್ತಿತ್ವಕ್ಕೆ ತಕ್ಕ ಹೇಳಿಕೆ ನೀಡುತ್ತಿಲ್ಲ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ನೀಡಿದ್ದ ಹೇಳಿಕೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಮರ್ಥಿಸಿಕೊಂಡಿದ್ದಾರೆ.
ಸದನದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆಕ್ಷೇಪಣೆಗೆ ತಿರುಗೇಟು ನೀಡಿದ ಅವರು, ‘ನಾನು ಏನನ್ನೂ ಹೇಳಿಲ್ಲ. ರಾಜ್ಯಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆಯು ಅವರ ವ್ಯಕ್ತಿತ್ವಕ್ಕೆ ತಕ್ಕುದಾದುದಲ್ಲ ಎಂದಷ್ಟೇ ಹೇಳಿದ್ದೆ’ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕ ತಿರುವಾಂಕೂರ್ ರಾಧಾಕೃಷ್ಣನ್, ‘ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ವಿರುದ್ಧ ಮುಖ್ಯಮಂತ್ರಿ ಒಂದಾದರೂ ಒಳ್ಳೆಯ ಮಾತುಗಳನ್ನಾಡಿದ್ದಾರೆಯೇ? ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ಇಂಡಿಯಾ ಒಕ್ಕೂಟದ ಮುಖಂಡ ರಾಹುಲ್ ಗಾಂಧಿ ವಿರುದ್ಧ ಪಿಣರಾಯಿ ಹೇಳಿಕೆ ನೀಡಿದ್ದೇ ಹೆಚ್ಚು’ ಎಂದು ದೂರಿದರು.
ಈ ಆರೋಪವನ್ನು ಅಲ್ಲಗಳೆದ ವಿಜಯನ್, ‘ಕೇರಳದ ಮುಖ್ಯಮಂತ್ರಿಯನ್ನು ಕೇಂದ್ರದ ಕೆಲ ತನಿಖಾ ಸಂಸ್ಥೆಗಳು ಏಕೆ ಇನ್ನೂ ಬಂಧಿಸಿಲ್ಲ ಎಂದು ಪ್ರಶ್ನಿಸುವಂತೆ ರಾಜ್ಯದಲ್ಲಿರುವ ಕಾಂಗ್ರೆಸ್ನ ಕೆಲ ಮುಖಂಡರು ರಾಹುಲ್ ಗಾಂಧಿ ಅವರಿಗೆ ಸಲಹೆ ನೀಡಿದ್ದಾರೆ. ಹಾಗಿದ್ದರೆ ರಾಹುಲ್ ಅವರು ಯಾವ ಆಧಾರದಡಿಯಲ್ಲಿ ಈ ಪ್ರಶ್ನೆಯನ್ನು ಕೇಳಿದ್ದಾರೆ. ಸಹಜವಾಗಿ ಅವರು ಕೇಳಿದ ಪ್ರಶ್ನೆಗೆ, ನಾನು ನೀಡಿದ ಉತ್ತರ ಸರಿಯಾಗಿಯೇ ಇದೆ’ ಎಂದಿದ್ದಾರೆ.
‘ಕೇಂದ್ರದ ತನಿಖಾ ತಂಡಗಳು ರಾಜ್ಯಕ್ಕೆ ಬಂದಾಗ ಇಲ್ಲಿನ ಕೆಲ ನಾಯಕರು ಬೆಂಕಿಗೆ ಎಣ್ಣೆ ಸುರಿದಿದ್ದೇ ಹೆಚ್ಚು. ಇವರ ಪ್ರಯತ್ನಕ್ಕೆ ರಾಹುಲ್ ಇನ್ನಷ್ಟು ತುಪ್ಪ ಸುರಿಯುವ ಕೆಲಸ ಮಾಡಬಾರದಿತ್ತು’ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.