ADVERTISEMENT

ಕೇರಳ: ಇಬ್ಬರು ಕುಲಪತಿಗಳಿಗೆ ಹುದ್ದೆ ತೊರೆಯಲು ನೋಟಿಸ್‌

ಪಿಟಿಐ
Published 7 ಮಾರ್ಚ್ 2024, 15:45 IST
Last Updated 7 ಮಾರ್ಚ್ 2024, 15:45 IST
ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌
ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌   

ತಿರುವನಂತರಪುರ: ಕೇರಳದ ಕ್ಯಾಲಿಕಟ್‌ ವಿಶ್ವವಿದ್ಯಾಲಯ ಮತ್ತು ಶ್ರೀ ಶಂಕರಾಚಾರ್ಯ ಸಂಸ್ಕೃತಿ ವಿಶ್ವವಿದ್ಯಾಲದಯದ ಕುಲಪತಿಗಳು ತಮ್ಮ ಹುದ್ದೆ ತೊರೆಯುವಂತೆ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಸೂಚಿಸಿದ್ದಾರೆ.

ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ನಿಯಮಗಳನ್ನು ಉಲ್ಲಂಘಿಸಿ ಈ ಇಬ್ಬರು ಕುಲಪತಿಗಳ ನೇಮಕ ಆಗಿರುವ ಕಾರಣ, ಅವರಿಗೆ ಹುದ್ದೆ ತೊರೆಯುವಂತೆ ಸೂಚನೆ ನೀಡಲಾಗಿದೆ ಎಂದು ಗುರುವಾರ ಮೂಲಗಳು ತಿಳಿಸಿವೆ. 

ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ ಈ ಇಬ್ಬರು ಕುಲಪತಿಗಳ ನೇಮಕಾತಿಗಳನ್ನು ಅನೂರ್ಜಿತ ಎಂದು ಪರಿಗಣಿಸಲಾಗಿದೆ. ಆದರೆ, ಕೇರಳ ಹೈಕೋರ್ಟ್‌ ನಿರ್ದೇಶನದಿಂದಾಗಿ ರಾಜ್ಯಪಾಲರ ಆದೇಶವನ್ನು ಇನ್ನೂ 10 ದಿನಗಳವರೆಗೆ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ADVERTISEMENT

ಯುಜಿಸಿ ನಿಯಮಾವಳಿಗೆ ವಿರುದ್ಧವಾಗಿದೆ ಎಂದು ಎಪಿಜೆ ಅಬ್ದುಲ್‌ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ನೇಮಕವನ್ನು ಸುಪ್ರೀಂ ಕೋರ್ಟ್‌ 2022ರ ಅಕ್ಟೋಬರ್‌ನಲ್ಲಿ ರದ್ದುಗೊಳಿಸಿತ್ತು. ಈ ತೀರ್ಪಿನ ಬಳಿಕ ರಾಜ್ಯಪಾಲರು ವಿವಿಧ ಕುಲಪತಿಗಳಿಗೆ ಶೋಕಾಸ್‌ ನೋಟಿಸ್‌ ನೀಡಿದ್ದರು. ಅದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್‌ ಮೊರೆ ಹೋಗಿದ್ದರು.

ಈ ಕುರಿತು ಆರು ವಾರಗಳಲ್ಲಿ ಕುಲಪತಿಗಳ ವಿಚಾರಣೆ ನಡೆಸುವಂತೆ ಕುಲಾಧಿಪತಿಯಾದ ರಾಜ್ಯಪಾಲರಿಗೆ ಕೇರಳ ಹೈಕೋರ್ಟ್‌ ಈ ವರ್ಷದ ಜನವರಿಯಲ್ಲಿ ತಿಳಿಸಿತ್ತು. ಅಲ್ಲದೆ ಆ ನಂತರ ತೆಗೆದುಕೊಂಡ ಯಾವುದೇ ನಿರ್ಧಾರವನ್ನು 10 ದಿನಗಳವರೆಗೆ ಜಾರಿಗೊಳಿಸದಂತೆ ನಿರ್ದೇಶಿಸಿತ್ತು ಎಂದು ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.