ತಿರುವನಂತಪುರ: ಕೇರಳ ವಿಧಾನಸಭೆಯ ಬಜೆಟ್ ಅಧಿವೇಶನ ಗುರುವಾರ ನಾಟಕೀಯ ಆರಂಭಕ್ಕೆ ಸಾಕ್ಷಿಯಾಯಿತು. ಬಜೆಟ್ ಅಧಿವೇಶನಕ್ಕೂ ಮುನ್ನ ಸದನವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಆರಂಭಿಕ ಮತ್ತು ಕೊನೆಯ ಪ್ಯಾರಾ ಮಾತ್ರ ಓದಿದರು.
ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಕಳೆದ ಕೆಲ ಸಮಯಗಳಿಂದ ಜಟಾಪಟಿ ನಡೆಯುತ್ತಿದೆ. ರಾಜ್ಯಪಾಲರು ಭಾಷಣದ ಎರಡು ಪ್ಯಾರಾ ಮಾತ್ರ ಓದಿರುವುದು ಈ ‘ಸಂಘರ್ಷದ’ ಮುಂದುವರಿದ ಭಾಗ ಎನ್ನಲಾಗಿದೆ.
ಬೆಳಿಗ್ಗೆ 9ಕ್ಕೆ ಸದನಕ್ಕೆ ಬಂದ ರಾಜ್ಯಪಾಲರನ್ನು ಮುಖ್ಯಮಂತ್ರಿ ಹಾಗೂ ಸ್ಪೀಕರ್ ಎ.ಎನ್.ಶಂಶೀರ್ ಬರಮಾಡಿಕೊಂಡರು. ಭಾಷಣದ ಮೊದಲ ಪ್ಯಾರಾ ಓದಿದ ರಾಜ್ಯಪಾಲರು, ಇನ್ನು ಕೊನೆಯ ಪ್ಯಾರಾ ಓದುವುದಾಗಿ ಹೇಳಿದರು. ಕೊನೆಯ ಪ್ಯಾರಾ ಓದಿದ ಬಳಿಕ ಸದನದಿಂದ ನಿರ್ಗಮಿಸಿದರು.
ವಿರೋಧ ಪಕ್ಷ ಯುಡಿಎಫ್ನ ಸದಸ್ಯರು ರಾಜ್ಯಪಾಲರ ಕ್ರಮದ ವಿರುದ್ಧ ಪ್ರತಿಭಟಿಸಿದರು. ‘ರಾಜ್ಯಪಾಲರು ಇಡೀ ಭಾಷಣ ಓದುವ ಅಗತ್ಯವಿಲ್ಲ’ ಎಂದು ಸ್ಪೀಕರ್ ಹೇಳಿದರು.
ರಾಜ್ಯಪಾಲರು ವಿಧಾಸಭೆಗೆ ಅಗೌರವ ತೋರಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಹಾಗೂ ಸಿಪಿಎಂ ನಾಯಕ ಇ.ಪಿ.ಜಯರಾಜನ್ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.