ADVERTISEMENT

ಕೇರಳದಲ್ಲಿ ಫೋನ್ ಕದ್ದಾಲಿಕೆ: ವರದಿ ಕೇಳಿದ ರಾಜ್ಯಪಾಲ

ಪಿಟಿಐ
Published 11 ಸೆಪ್ಟೆಂಬರ್ 2024, 15:24 IST
Last Updated 11 ಸೆಪ್ಟೆಂಬರ್ 2024, 15:24 IST
ಆರಿಫ್ ಮೊಹಮದ್ ಖಾನ್
ಆರಿಫ್ ಮೊಹಮದ್ ಖಾನ್   

ತಿರುವನಂತಪುರ: ಫೋನ್ ಕದ್ದಾಲಿಕೆಯ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಿ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಪತ್ರ ಬರೆದಿದ್ದಾರೆ.

ಎಡಪಕ್ಷದ ಶಾಸಕ ಪಿ.ವಿ. ಅನ್ವರ್ ಅವರು ‘ಸಚಿವರ ದೂರವಾಣಿ ಸಂಭಾಷಣೆಯನ್ನು ಪೊಲೀಸರು ಕದ್ದಾಲಿಸಿದ್ದಾರೆ. ಕೆಲವು ಪೊಲೀಸ್ ಅಧಿಕಾರಿಗಳು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ’ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ಕ್ರಮವನ್ನು ತಿಳಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಪೊಲೀಸರು, ಸಚಿವರ ಫೋನ್ ಕರೆಗಳನ್ನು ಕದ್ದಾಲಿಸಿರುವುದು ಕಾನೂನು ಮತ್ತು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ’ ಎಂದು ರಾಜಭವನ ಹೇಳಿದೆ.

ADVERTISEMENT

ಮಲಪ್ಪುರ, ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅನ್ವರ್ ಮತ್ತು ಐಪಿಎಸ್ ಅಧಿಕಾರಿ ಸುಜಿತ್ ದಾಸ್ ನಡುವಿನ ಸೋರಿಕೆಯಾದ ದೂರವಾಣಿ ಸಂಭಾಷಣೆಯ ಬಗ್ಗೆಯೂ ರಾಜ್ಯಪಾಲರು ವಿವರ ಕೋರಿದ್ದಾರೆ.

ನಿಲಂಬೂರು ಶಾಸಕರೊಂದಿಗೆ ನಡೆಸಿರುವ ದೂರವಾಣಿ ಸಂಭಾಷಣೆಯು ಸೋರಿಕೆಯಾಗಿದ್ದರಿಂದ ದಾಸ್ ಅವರನ್ನು ಅಮಾನತುಗೊಳಿಸಲಾಗಿದೆ.

ಮುಖ್ಯಮಂತ್ರಿಗೆ ಆಪ್ತರಾಗಿರುವ ಅವರ ರಾಜಕೀಯ ಕಾರ್ಯದರ್ಶಿ ಪಿ. ಶಶಿ ಮತ್ತು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಆರ್. ಅಜಿತ್ ಕುಮಾರ್ ವಿರುದ್ಧ ಶಾಸಕ ಅನ್ವರ್‌ ಗಂಭೀರ ಆರೋಪಗಳನ್ನು ಮಾಡಿದ್ದು, ಇವರಿಬ್ಬರ ವಿರುದ್ಧವೂ ಕಾನೂನು ಕ್ರಮಕ್ಕೆ ಒತ್ತಡ ಹೆಚ್ಚಿದ್ದರಿಂದ ರಾಜಭವನವು ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಸಚಿವರು, ರಾಜಕೀಯ ನಾಯಕರು ಮತ್ತು ಪತ್ರಕರ್ತರ ದೂರವಾಣಿ ಸಂಭಾಷಣೆಗಳನ್ನು ಹಿರಿಯ ಐಪಿಎಸ್ ಅಧಿಕಾರಿಯು ಕದ್ದಾಲಿಸಿದ್ದಾರೆ ಎಂದು ದೂರಿರುವ ಶಾಸಕರು, ಇವರು ಚಿನ್ನ ಕಳ್ಳಸಾಗಣೆ ದಂಧೆಯಲ್ಲೂ ಭಾಗಿಯಾಗಿದ್ದಾರೆ. ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲೂ ಪಾಲ್ಗೊಂಡಿದ್ದಾರೆ ಎಂದೂ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.