ADVERTISEMENT

ಕೇರಳ | ಅಂಗವಿಕಲ ಮಕ್ಕಳಿಗಾಗಿ ‘ಕ್ರೀಡಾ ಕೈಪಿಡಿ’

ಪಿಟಿಐ
Published 3 ಜುಲೈ 2024, 15:22 IST
Last Updated 3 ಜುಲೈ 2024, 15:22 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ತಿರುವನಂತಪುರ: ಭಿನ್ನ ಸಾಮರ್ಥ್ಯದ ಮಕ್ಕಳಿಗಾಗಿ ವಿಶಿಷ್ಟವಾದ ‘ಅಂತರ್ಗತ ಕ್ರೀಡಾ ಕೈಪಿಡಿ’ ಮತ್ತು ಪೋಷಕರಿಗೆ ವಿಶೇಷ ಪುಸ್ತಕ ಸೇರಿದಂತೆ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಕಾರ್ಯಕ್ರಮಗಳನ್ನು ಕೇರಳ ಸರ್ಕಾರವು ಬುಧವಾರ ಘೋಷಿಸಿದೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಸಂಕಷ್ಟ ಎದುರಿಸುವ ಮಕ್ಕಳನ್ನು ಗುರುತಿಸಿ, ಪ್ರೋತ್ಸಾಹ ನೀಡುವ ‘ಹೆಲ್ಪಿಂಗ್ ಹ್ಯಾಂಡ್‌’ ಹಾಗೂ ಕರಾವಳಿ ತೀರದ ಮಕ್ಕಳ ಶೈಕ್ಷಣಿಕ, ಸಾಮಾಜಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಅನುವು ಮಾಡಿಕೊಡುವ ‘ಬೀಚ್‌ ಟು ಬೆಂಚ್‌’ ಕಾರ್ಯಕ್ರಮವು ಶಿಕ್ಷಣ ಇಲಾಖೆಯು ಜಾರಿಗೊಳಿಸುತ್ತಿರುವ ಮಹತ್ವದ ಕಾರ್ಯಕ್ರಮಗಳಾಗಿವೆ.

ADVERTISEMENT

2024–25ನೇ ಶೈಕ್ಷಣಿಕ ಸಾಲಿನಲ್ಲಿ ಶಿಕ್ಷಣ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ವಿನೂತನ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರವಾದ ಮಾಹಿತಿ ನೀಡಿದರು.

ರಾಜ್ಯದಲ್ಲಿ ಪಠ್ಯಕ್ರಮ ಪರಿಷ್ಕರಣೆಯ ಭಾಗವಾಗಿ ಪೋಷಕರಿಗೆ ಪುಸ್ತಕಗಳನ್ನು ನೀಡಲು ನಿರ್ಧರಿಸಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಇಂತಹ ಪುಸ್ತಕವನ್ನು ಪೋಷಕರಿಗಾಗಿ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಮತ್ತು ಹೈಯರ್ ಸೆಕೆಂಡರಿ ಸೇರಿದಂತೆ ನಾಲ್ಕು ಹಂತಗಳಲ್ಲಿ ಸಿದ್ಧಪಡಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಈ ಪುಸ್ತಕವು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ವಿವರಿಸುತ್ತದೆ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ನಡುವಿನ ಸಂಬಂಧ ಬೆಳೆಸುವ ಅಗತ್ಯವನ್ನು ವಿವರಿಸುತ್ತದೆ. ಇದರ ಭಾಗವಾಗಿ ಸಮಗ್ರಶಿಕ್ಷಾ ಕೇರಳದ ಆಶ್ರಯದಲ್ಲಿ ಪೋಷಕರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅವರು ಹೇಳಿದರು.

ಕ್ರೀಡಾ ಕೈಪಿಡಿ: ಅಂಗವಿಕಲ ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸಲು ಹಾಗೂ ಅವರ ಭಾಗವಹಿಸುವಿಕೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಕೇರಳದ ಶಿಕ್ಷಣ ಇಲಾಖೆಯು ವಿಶಿಷ್ಟವಾದ ‘ಕ್ರೀಡಾ ಕೈಪಿಡಿ’ಯನ್ನು ವಿನ್ಯಾಸಗೊಳಿಸಿದೆ.

ದೇಶದಲ್ಲಿ ಮೊದಲ ಬಾರಿಗೆ ಇಂತಹ ದಾಖಲೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ವರ್ಷದಿಂದಲೇ ಕೈಪಿಡಿಯಲ್ಲಿರುವಂತೆ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ತಿಳಿಸಿದರು.

‘ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ‘ಆರೋಗ್ಯಕರ ಮಕ್ಕಳು’ ಎಂಬ ಮತ್ತೊಂದು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿರುವುದಾಗಿ’ ಸಚಿವರು ಪ್ರಕಟಿಸಿದರು.

ಸ್ಟೇಟ್‌ ಕೌನ್ಸಿಲ್‌ ಆಫ್‌ ಎಜುಕೇಷನಲ್‌ ರಿಸರ್ಚ್ ಆ್ಯಂಡ್‌ ಟ್ರೈನಿಂಗ್‌ (ಎಸ್‌ಸಿಇಆರ್‌ಟಿ) ವಿನ್ಯಾಸಗೊಳಿಸಿರುವ ಈ ಕಾರ್ಯಕ್ರಮವನ್ನು ಈಗಾಗಲೇ ಪಠ್ಯಕ್ರಮ ಸಮಿತಿಯು ಅನುಮೋದಿಸಿದ್ದು, ಎರಡು ಪುಸ್ತಕಗಳನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು.

ಆಟಿಸಂ (ಸ್ವಲೀನ) ಹೊಂದಿದ ಮಕ್ಕಳನ್ನು ಬೆಂಬಲಿಸಲಿಕ್ಕಾಗಿ, ರಾಜ್ಯದ ಎಲ್ಲ 14 ಜಿಲ್ಲೆಗಳಲ್ಲಿ ₹37.80 ಕೋಟಿ ವೆಚ್ಚದಲ್ಲಿ ಮಾದರಿ ಆಟಿಸಂ ಸಂಕೀರ್ಣಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಅಂಗವಿಕಲ ಮಕ್ಕಳಿಗಾಗಿ ಸಿದ್ಧಪಡಿಸಲಾಗಿರುವ ‘ಅಂತರ್ಗತ ಶಿಕ್ಷಣ’ ಕಾರ್ಯಕ್ರಮದ ಭಾಗವಾಗಿ ₹121.21 ಕೋಟಿ ಮೊತ್ತದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಎರ್ನಾಕುಲಂ ಜಿಲ್ಲೆಯಲ್ಲಿ ಅ.18ರಿಂದ 22ರವರೆಗೆ ವಾರ್ಷಿಕ ಶಾಲಾ ಕ್ರೀಡಾಕೂಟವನ್ನು ನಡೆಸಲಾಗುವುದು ಎಂದು ಶಿವನ್‌ಕುಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.