ADVERTISEMENT

ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧ ಸುಪ್ರೀಂ ಕೋರ್ಟ್‌ಗೆ ಕೇರಳ ಅರ್ಜಿ

ಪಿಟಿಐ
Published 23 ಮಾರ್ಚ್ 2024, 13:43 IST
Last Updated 23 ಮಾರ್ಚ್ 2024, 13:43 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಕೇರಳ ವಿಧಾನಸಭೆಯು ಅಂಗೀಕಾರ ನೀಡಿರುವ ನಾಲ್ಕು ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕುತ್ತಿಲ್ಲ ಎಂದು ದೂರಿ ಕೇರಳ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ರಾಷ್ಟ್ರಪತಿ ವಿರುದ್ಧ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ಅಸಾಮಾನ್ಯ ನಡೆ ಎಂದು ವಿಶ್ಲೇಷಿಸಲಾಗಿದೆ.

ವಿಶ್ವವಿದ್ಯಾಲಯ ಕಾನೂನುಗಳ (ತಿದ್ದುಪಡಿ) (ನಂ. 2) ಮಸೂದೆ –2021, ಕೇರಳ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ – 2022, ವಿಶ್ವವಿದ್ಯಾಲಯ ಕಾನೂನುಗಳ (ತಿದ್ದುಪಡಿ) ಮಸೂದೆ – 2022 ಹಾಗೂ ವಿಶ್ವವಿದ್ಯಾಲಯ ಕಾನೂನುಗಳ (ತಿದ್ದುಪಡಿ) (ನಂ. 3) ಮಸೂದೆ – 2022ಕ್ಕೆ ರಾಷ್ಟ್ರಪತಿ ಯಾವುದೇ ಕಾರಣ ಉಲ್ಲೇಖಿಸದೆ ಅಂಕಿತ ಹಾಕದೆ ಇರುವುದನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೇರಳ ಸರ್ಕಾರ ಕೋರಿದೆ.

ಕೇಂದ್ರ ಸರ್ಕಾರ, ರಾಷ್ಟ್ರಪತಿಯವರ ಕಾರ್ಯದರ್ಶಿ, ಕೇರಳ ರಾಜ್ಯ‍ಪಾಲ ಆರೀಫ್ ಮೊಹಮ್ಮದ್ ಖಾನ್ ಮತ್ತು ಅವರ ಹೆಚ್ಚುವರಿ ಕಾರ್ಯದರ್ಶಿಯನ್ನು ಪ್ರತಿವಾದಿಗಳು ಎಂದು ಅರ್ಜಿಯಲ್ಲಿ ಹೆಸರಿಸಲಾಗಿದೆ.

ADVERTISEMENT

ರಾಜ್ಯಪಾಲರು ಈ ನಾಲ್ಕು ಮಸೂದೆಗಳು ಸೇರಿ ಒಟ್ಟು ಏಳು ಮಸೂದೆಗಳನ್ನು ರಾಷ್ಟ್ರಪತಿಯವರ ಪರಿಶೀಲನೆಗೆ ಇರಿಸಿಕೊಂಡ ಕ್ರಮವನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂಬ ಕೋರಿಕೆಯನ್ನು ಕೂಡ ಸರ್ಕಾರವು ಕೋರ್ಟ್ ಮುಂದೆ ಇರಿಸಿದೆ. ರಾಜ್ಯದ ವ್ಯಾಪ್ತಿಯ ವಿಷಯಗಳಿಗೆ ಸಂಬಂಧಿಸಿದ ಈ ನಾಲ್ಕು ಮಸೂದೆಗಳಿಗೆ, ಯಾವ ನಿರ್ದಿಷ್ಟ ಕಾರಣವೂ ಇಲ್ಲದೆ, ಅಂಕಿತ ತಡೆಹಿಡಿಯುವಂತೆ ಕೇಂದ್ರ ಸರ್ಕಾರವು ರಾಷ್ಟ್ರಪತಿಯವರಿಗೆ ನೀಡಿರುವ ಸಲಹೆಯು ಸಂವಿಧಾನದ 14ನೆಯ ವಿಧಿಯ ಉಲ್ಲಂಘನೆ ಇದೆ ಎಂದು ಕೇರಳ ಸರ್ಕಾರವು ಅರ್ಜಿಯಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.