ADVERTISEMENT

ಮೂತ್ರಪಿಂಡ ಕಸಿ ಜಾಲ: ಬಾಂಗ್ಲಾ ಪ್ರಜೆಗಳು ಸೇರಿ 7 ಬಂಧನ

ಪಿಟಿಐ
Published 9 ಜುಲೈ 2024, 19:38 IST
Last Updated 9 ಜುಲೈ 2024, 19:38 IST
–
   

ನವದೆಹಲಿ: ಬಾಂಗ್ಲಾದೇಶ ಮತ್ತು ದೆಹಲಿಯಲ್ಲಿ ಮೂತ್ರಪಿಂಡ ಕಸಿ ಜಾಲ ನಡೆಸುತ್ತಿದ್ದ ಆರೋಪದಡಿ ದೆಹಲಿ ಮೂಲದ ವೈದ್ಯೆ ಹಾಗೂ ಬಾಂಗ್ಲಾದೇಶ ಪ್ರಜೆಗಳು ಸೇರಿದಂತೆ 7 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ತಜ್ಞೆಯಾಗಿರುವ ಡಾ.ಡಿ.ವಿಜಯಾ ರಾಜಕುಮಾರಿ, ವೈದ್ಯೆಯ ಸಹಾಯಕ ವಿಕ್ರಮ್‌ ಸಿಂಗ್, ಬಾಂಗ್ಲಾದೇಶ ಪ್ರಜೆಗಳಾದ ರಸೆಲ್, ಮೊಹಮ್ಮದ್ ಸುಮೊನ್ ಮಿಯಾ ಮತ್ತು ಮೊಹಮ್ಮದ್‌ ರಕೋನ್ ಅಲಿಯಾಸ್ ರಾಹುಲ್‌ ಸರ್ಕಾರ್ ಬಂಧಿತ ಇತರರು.

ರಾ.ರಾಜಕುಮಾರಿ ಅವರು ನೊಯ್ಟಾದ ಯತಾರ್ಥ ಆಸ್ಪತ್ರೆಯಲ್ಲಿ ಮೂತ್ರಿಪಿಂಡ ಕಸಿ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿದ್ದರು ಎಂದು ಆರೋಪಿಸಲಾಗಿದೆ.

ADVERTISEMENT

‘ರಸೆಲ್‌ ಈ ಜಾಲದ ಸಂಚುಕೋರ. ಈತ 2019ರಲ್ಲಿ ಭಾರತಕ್ಕೆ ಬಂದಿದ್ದನಲ್ಲದೇ, ಬಾಂಗ್ಲಾದೇಶದ ರೋಗಿಯೊಬ್ಬರಿಗೆ ತನ್ನ ಮೂತ್ರಪಿಂಡ ದಾನ ಮಾಡಿದ್ದ’ ಎಂದು ಡಿಸಿಪಿ (ಕ್ರೈಂ) ಅಮಿತ್‌ ಗೋಯೆಲ್ ತಿಳಿಸಿದ್ದಾರೆ.

ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದವರ ಪೈಕಿ ಬಹುತೇಕರು ಬಾಂಗ್ಲಾದೇಶದವರು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವರನ್ನು ಭಾರತಕ್ಕೆ ಕರೆತಂದು ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತಿತ್ತು ಎಂದು ಹೇಳಿದ್ದಾರೆ.

‘ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಬ್ಬ ರೋಗಿ ₹25–30 ಲಕ್ಷ ವ್ಯಯಿಸಬೇಕಾಗುತ್ತದೆ. ಇದರಲ್ಲಿ, ರಸೆಲ್‌ ಶೇ 2025ರಷ್ಟನ್ನು ಕಮಿಷನ್‌ ಆಗಿ ಪಡೆಯುತ್ತಿದ್ದ’ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.