ಚುರಚಾಂದಪುರ/ ಇಂಫಾಲ್: ಮೈಥೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರದಲ್ಲಿ ಶಾಂತಿ ಮರು ಸ್ಥಾಪಿಸಲು ಪರಿಹಾರ ಮಾರ್ಗಕ್ಕೆ ಒತ್ತಾಯಿಸಿ ಕುಕಿ ಸಮುದಾಯದ ಸಾವಿರಾರು ಮಂದಿ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಸರಣಿ ರ್ಯಾಲಿಗಳನ್ನು ನಡೆಸಿದರು.
ಈ ಪ್ರತಿಭಟನಾ ಮೆರವಣಿಗೆಯಲ್ಲಿ ಚುರಚಾಂದಪುರ, ಕಾಂಗ್ಪೊಕ್ಪಿ ಹಾಗೂ ತೆಂಗ್ನೌಪಾಲ್ ಜಿಲ್ಲೆಗಳ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಸಮುದಾಯದ ಸಾವಿರಾರು ಮಂದಿ, ತಮ್ಮ ಸಮುದಾಯಕ್ಕೆ ಪ್ರತ್ಯೇಕ ಆಡಳಿತ ವ್ಯವಸ್ಥೆ ರೂಪಿಸಬೇಕು ಒತ್ತಾಯಿಸಿದರು. ಜೊತೆಗೆ ಭಾರತ–ಮ್ಯಾನ್ಮಾರ್ ಗಡಿಯಲ್ಲಿರುವ ಮುಕ್ತ ಸಂಚಾರ ವ್ಯವಸ್ಥೆ ರದ್ದತಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನಾ ಮೆರವಣಿಗೆ ಬಳಿಕ ಸಮುದಾಯವು, ರಾಜ್ಯದಲ್ಲಿ ಶಾಂತಿ ಪುನರ್ ಸ್ಥಾಪನೆಯ ಕುರಿತಾದ ಪತ್ರವನ್ನು ಚುರಚಾಂದಪುರದ ಆಯುಕ್ತರ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಲ್ಲಿಸಿತು.
ಪ್ರತಿಭಟನಾ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪ್ರಮುಖ ಸ್ಥಳಗಳಲ್ಲಿ ಕೇಂದ್ರೀಯ ಮತ್ತು ರಾಜ್ಯ ಭದ್ರತಾ ಪಡೆಗಳ ಮೂಲಕ ಭದ್ರತೆ ಕಲ್ಪಿಸಲಾಗಿತ್ತು.
ಭಾರತ–ಮ್ಯಾನ್ಮಾರ್ನ 1,600 ಕಿ.ಮೀ ವ್ಯಾಪ್ತಿಯಲ್ಲಿ ಬೇಲಿ ನಿರ್ಮಿಸಲು ನಿರ್ಧರಿಸಿರುವ ಭಾರತ ಸರ್ಕಾರವು, ಉಭಯ ದೇಶಗಳ ನಡುವಿನ ಮುಕ್ತ ಸಂಚಾರ ವ್ಯವಸ್ಥೆಯನ್ನು ರದ್ದುಪಡಿಸಿದೆ.
ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ರಾಜ್ಯಗಳು ಮ್ಯಾನ್ಮಾರ್ನೊಂದಿಗೆ ಗಡಿಗಳನ್ನು ಹೊಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.