ADVERTISEMENT

Wayanad Landslide | ಭೂಕುಸಿತ: ವಿಜ್ಞಾನಿಗಳು ಹೇಳುವುದೇನು?

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 23:50 IST
Last Updated 30 ಜುಲೈ 2024, 23:50 IST
   
ಭೂಕುಸಿತ ಮುನ್ಸೂಚನೆ ವಿಧಾನ’ ಅಭಿವೃದ್ಧಿಪಡಿಸಬೇಕು. ನಿರ್ದಿಷ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಬಹುದು. ಆದರೆ, ಆ ಮಳೆಯಿಂದಾಗಿ ಭೂಕುಸಿತ ಉಂಟಾಗಲಿದೆಯೇ ಎಂಬ ಬಗ್ಗೆ ಖಚಿತವಾಗಿ ಹೇಳಲಾಗದು. ಭಾರಿ ಮಳೆ ಬಿದ್ದಾಗ, ಪ್ರತಿ ಬಾರಿಯೂ ಭೂಕುಸಿತಗಳು ಉಂಟಾಗುವುದಿಲ್ಲ. ಹೀಗಾಗಿ, ಭೂಕುಸಿತ ಕುರಿತು ಮುನ್ಸೂಚನೆ ನೀಡುವ ವಿಧಾನದ ಅಗತ್ಯವಿದೆ. ಇಂತಹ ವಿಧಾನದ ಅಭಿವೃದ್ಧಿ ಕಷ್ಟವಾದರೂ ಅಸಾಧ್ಯವೇನಲ್ಲ 
– ಮಾಧವನ್ ರಾಜೀವನ್, ಭೂವಿಜ್ಞಾನ ಸಚಿವಾಲಯದ ಮಾಜಿ ಕಾರ್ಯದರ್ಶಿ 
ಭಾರಿ ಮಳೆಯಾದಾಗ ಕೇರಳದಲ್ಲಿ ಭೂಕುಸಿತದ ಸಾಧ್ಯತೆ ಇರುವ ಪ್ರದೇಶಗಳ ಕುರಿತ ನಕ್ಷೆಗಳು ಲಭ್ಯವಿವೆ. ಭೂಕುಸಿತದ ಅಪಾಯ ಎದುರಿಸುವ ಸಾಧ್ಯತೆಯ ಪ್ರದೇಶಗಳನ್ನು ಗುರುತಿಸಿ, ಅವುಗಳಿಗೆ ಈ ಕುರಿತು ತಿಳಿವಳಿಕೆ ನೀಡಬೇಕು. ಇಂತಹ ಪ್ರದೇಶಗಳಲ್ಲಿ ಬೀಳುವ ಮಳೆ ಪ್ರಮಾಣದ ದತ್ತಾಂಶದ ನಿಗಾ ಇರಿಸಿ, ಅಪಾಯಕ್ಕೆ ಈಡಾಗಬಹುದಾದ ಪ್ರದೇಶಗಳಿಗೆ ಮುಂಚಿತವಾಗಿ ಎಚ್ಚರಿಕೆ ನೀಡುವ ವ್ಯವಸ್ಥೆ ರೂಪಿಸಬೇಕು. ಸದ್ಯ ಲಭ್ಯವಿರುವ ತಂತ್ರಜ್ಞಾನದಿಂದ ಇದು ಸಾಧ್ಯವಾಗಲಿದೆ. ಇದರಿಂದ ಜೀವಗಳನ್ನು ರಕ್ಷಿಸಬಹುದು
–ರಾಕ್ಸಿ ಮ್ಯಾಥ್ಯೂ ಕೆ., ಹವಾಮಾನ ವಿಜ್ಞಾನಿ, ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆ 
ಅರಬ್ಬಿ ಸಮುದ್ರದ ತಾಪಮಾನ ಹೆಚ್ಚುತ್ತಿರುವ ವಿದ್ಯಮಾನವನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಇದು ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ದಟ್ಟ ಮೋಡಗಳ ಸೃಷ್ಟಿಗೆ ಕಾರಣವಾಗುತ್ತಿದೆ. ಅಲ್ಲದೇ, ಕೇರಳದ ಕರಾವಳಿ ಬಳಿ ಅತ್ಯಂತ ಕಡಿಮೆ ಒತ್ತಡ ಪ್ರದೇಶ ಸೃಷ್ಟಿಯಾಗಿರುವುದರಿಂದ ಕಾಸರಗೋಡು, ಕಣ್ಣೂರು, ವಯನಾಡ್‌, ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಕಳೆದ ಎರಡು ವಾರಗಳಿಂದ ಭಾರಿ ಮಳೆಯಾಗುತ್ತಿದೆ. ಇದರಿಂದ ಮಣ್ಣು ಸಂಪೂರ್ಣ ಆರ್ದ್ರವಾಗಿತ್ತು. ಇದರ ಜೊತೆಗೆ, ಸೋಮವಾರವೂ ಭಾರಿ ಮಳೆ ಬಿದ್ದ ಕಾರಣ ವಯನಾಡ್‌ ಮತ್ತು ಇತರ ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿದೆ
– ಎಸ್‌.ಅಭಿಲಾಷ್, ನಿರ್ದೇಶಕ, ಅಡ್ವಾನ್ಸ್‌ಡ್ ಸೆಂಟರ್‌ ಫಾರ್ ಅಟ್ಮಾಸ್ಫಿರಿಕ್ ರೇಡಾರ್ ರಿಸರ್ಚ್‌, ಕೊಚ್ಚಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.